ADVERTISEMENT

24 ಗಂಟೆ ಕಾಲ ಪ್ರಚಾರ ನಿಷೇಧ; ಗಾಂಧಿ ಪ್ರತಿಮೆ ಎದುರು ಮಮತಾ ಧರಣಿ

ಪಿಟಿಐ
Published 13 ಏಪ್ರಿಲ್ 2021, 9:08 IST
Last Updated 13 ಏಪ್ರಿಲ್ 2021, 9:08 IST
ಕೋಲ್ಕತ್ತದ ಗಾಂಧಿ ಪ್ರತಿಮೆ ಎದುರು ಧರಣಿ ನಿರತವಾಗಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತ್ತದ ಗಾಂಧಿ ಪ್ರತಿಮೆ ಎದುರು ಧರಣಿ ನಿರತವಾಗಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ   

ಕೋಲ್ಕತ್ತ: 24 ಗಂಟೆ ಕಾಲ ಪ್ರಚಾರ ನಡೆಸುವುದಕ್ಕೆ ನಿಷೇಧ ಹೇರಿರುವ ಚುನಾವಣಾ ಆಯೋಗದ ಕ್ರಮವನ್ನು 'ಅಸಾಂವಿಧಾನಿಕ' ಎಂದು ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಕೋಲ್ಕತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದಾರೆ.

ಬೆಳಗ್ಗೆ 11.40ರ ಹೊತ್ತಿಗೆ ಗಾಲಿಕುರ್ಚಿಯಲ್ಲೇ ಮಹಾತ್ಮ ಗಾಂಧಿ ಪ್ರತಿಮೆ ಎದುರುಗಡೆ ಬಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಧರಣಿ ನಡೆಸಿದ್ದಾರೆ.

ಮಮತಾ ಬ್ಯಾನರ್ಜಿ ಒಬ್ಬರೇ ಧರಣಿ ನಡೆಸಿರುವುದು ವಿಶೇಷವೆನಿಸಿತ್ತು. ಟಿಎಂಸಿಯ ಯಾವುದೇ ಬೆಂಬಲಿಗರು ಸಾಥ್ ನೀಡಿರಲಿಲ್ಲ.

ADVERTISEMENT

ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಕೇಂದ್ರ ಭದ್ರತಾ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳು ರಾಜ್ಯದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದೆ. ಹೀಗಾಗಿ ಅವರ ಪ್ರಚಾರದ ಮೇಲೆ ನಿಷೇಧ ಹೇರಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ.

ಸೋಮವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ನಿಷೇಧ ಜಾರಿಯಲ್ಲಿ ಇರಲಿದೆ. ಚುನಾವಣಾ ಆಯೋಗದ ಈ ಕ್ರಮವನ್ನು ವಿರೋಧಿಸಿರುವ ಮಮತಾ ಬ್ಯಾನರ್ಜಿ, 'ಪ್ರಜಾಪ್ರಭುತ್ವ ವಿರೋಧಿ' ಮತ್ತು 'ಅಸಾಂವಿಧಾನಿಕ' ಎಂದು ತಿರುಗೇಟು ನೀಡಿದ್ದಾರೆ.

ಚುನಾವಣಾ ಆಯೋಗದ ಕ್ರಮ ಖಂಡಿಸಿರುವ ತೃಣಮೂಲ ಕಾಂಗ್ರೆಸ್, 'ಪ್ರಜಾಪ್ರಭುತ್ವದ ಕರಾಳ ದಿನ' ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.