ಇಂಫಾಲ್/ನವದೆಹಲಿ: ಮಣಿಪುರದಲ್ಲಿ 2023ರಲ್ಲಿ ಆರಂಭವಾದ ಹಿಂಸಾಚಾರಕ್ಕೆ ಸಂಬಂಧಿಸಿ ಮೈತೇಯಿ ಬಂಡುಕೋರ ಸಂಘಟನೆ ‘ಅರಂಬಾಯ್ ಟೆಂಗೋಲ್’ನ ನಾಯಕ ಕನನ್ ಸಿಂಗ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಮಣಿಪುರ ಮತ್ತೊಮ್ಮೆ ಉದ್ವಿಗ್ನಗೊಂಡಿದೆ.
‘ಅರಂಬಾಯ್ ಟೆಂಗೋಲ್’ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸರು ಮತ್ತು ಸೇನೆಯ ಸಂಗ್ರಹಾರಗಳಿಂದ ಶಸ್ತ್ರಾಸ್ತ್ರ ಲೂಟಿ, ಪೊಲೀಸ್ ಅಧಿಕಾರಿಗಳ ಅಪಹರಣ, ಕುಕಿ ಬುಡಕಟ್ಟು ಸಮುದಾಯಗಳ ಮೇಲೆ ಹಿಂಸಾಚಾರ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ.
ಇಂಫಾಲದ ವಿಮಾನ ನಿಲ್ದಾಣದಿಂದ ಕನನ್ ಸಿಂಗ್ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ. ಕನನ್ ಅವರಿಗೆ ಸಹಕಾರ ನೀಡಿದ ಸಂಬಂಧ ಮಣಿಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆದರೆ, ಕನನ್ ಅವರನ್ನು ಯಾವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಸಿಬಿಐ ನೀಡಿಲ್ಲ. ಬಂಧಿತ ಇತರ ನಾಲ್ವರು ಯಾರು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ನೀಡಿಲ್ಲ.
ಕನನ್ ಸಿಂಗ್ ಅವರನ್ನು ತಕ್ಷಣವೇ ಅಸ್ಸಾಂನ ಗುವಹಾಟಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಗುವಾಹಟಿಯಲ್ಲಿ ನಡೆಸಲಾಗುತ್ತಿದೆ. ಹಿಂಸಾಚಾರದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಡ್ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.