ADVERTISEMENT

ಜಾರ್ಖಂಡ್ ರೈಲ್ವೆ ಹಳಿ ಸ್ಪೋಟದಲ್ಲಿ ಸಿಪಿಐ (ಮಾವೊವಾದಿ) ಸಂಘಟನೆಯ ಪಾತ್ರ: ಪೊಲೀಸ್

ಪಿಟಿಐ
Published 20 ನವೆಂಬರ್ 2021, 9:02 IST
Last Updated 20 ನವೆಂಬರ್ 2021, 9:02 IST
ಜಾರ್ಖಂಡನ್‌ ಲತೇಹಾರ್ ಜಿಲ್ಲೆಯ ರಿಚುಗುಟಾ – ಡೆಮು ನಿಲ್ದಾಣದ ನಡುವಿನ ರೈಲ್ವೆ ಹಳಿಯನ್ನು ಮಾವೊವಾದಿ ಬಂಡುಕೋರರು ಶುಕ್ರವಾರ ಮಧ್ಯರಾತ್ರಿ ಸ್ಫೋಟಿಸಿದ್ದು, ಭದ್ರತಾ ಪಡೆಗಳು ಶನಿವಾರ ಘಟನಾ ಸ್ಥಳದಲ್ಲಿ ತಪಾಸಣೆ ನಡೆಸುತ್ತಿರುವ ದೃಶ್ಯ. 
ಜಾರ್ಖಂಡನ್‌ ಲತೇಹಾರ್ ಜಿಲ್ಲೆಯ ರಿಚುಗುಟಾ – ಡೆಮು ನಿಲ್ದಾಣದ ನಡುವಿನ ರೈಲ್ವೆ ಹಳಿಯನ್ನು ಮಾವೊವಾದಿ ಬಂಡುಕೋರರು ಶುಕ್ರವಾರ ಮಧ್ಯರಾತ್ರಿ ಸ್ಫೋಟಿಸಿದ್ದು, ಭದ್ರತಾ ಪಡೆಗಳು ಶನಿವಾರ ಘಟನಾ ಸ್ಥಳದಲ್ಲಿ ತಪಾಸಣೆ ನಡೆಸುತ್ತಿರುವ ದೃಶ್ಯ.    

ಲತೇಹಾರ್‌/ಮೇದಿನಿನಗರ: ನಿಷೇಧಿತ ಸಿಪಿಐ (ಮಾವೊವಾದಿ) ಸಂಘಟನೆಯ ಸದಸ್ಯರು ಶನಿವಾರ ಮುಂಜಾನೆಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಒಂದು ಭಾಗವನ್ನು ಸ್ಪೋಟಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ಬರ್ಕಾಕಾನಾ – ಗಡ್ವಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ರಿಚುಗುಟಾ ಮತ್ತು ಡೆಮು ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಪಿಐ-ಮಾವೊವಾದಿ ಗುಂಪಿನ ಸದಸ್ಯರು ಲತೇಹಾರ್‌ನಲ್ಲಿ ಹಳಿಗಳನ್ನು ಸ್ಫೋಟಿಸಿ, ಬರ್ಕಾಕಾನಾ-ಗರ್ಹ್ವಾ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪಲಮು‌ ವಲಯದ ಡಿಐಜಿ ರಾಜ್ ಕುಮಾರ್ ಲಾಕ್ರಾ ಸುದ್ದಿಸಂಸ್ಥೆಗೆ ತಿಳಿಸಿದರು.

ಸಿಪಿಐ (ಮಾವೋವಾದಿ) ಸಂಘಟನೆಯು ತನ್ನ ನಾಯಕ ಪ್ರಶಾಂತ್‌ ಬೋಸ್‌ ಅವರ ಬಂಧನವನ್ನು ವಿರೋಧಿಸಿ, ಶನಿವಾರ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ. ಬೋಸ್‌ ಪತ್ತೆಗೆ ಸರ್ಕಾರ ₹1 ಕೋಟಿ ನಗದು ಪುರಸ್ಕಾರ ಘೋಷಿಸಿತ್ತು.

ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸಗಡ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಭಾಗದಲ್ಲಿ ನಡೆದಿರುವ 100ಕ್ಕೂ ಹೆಚ್ಚು ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಬೋಸ್ ಆಗಿದ್ದರು.

ಸ್ಪೋಟದಿಂದ ಹಾನಿಗೊಳಗಾಗಿರುವ ರೈಲ್ವೆ ಹಳಿಗಳನ್ನು ರೈಲ್ವೆ ಸಿಬ್ಬಂದಿ ಸರಿಪಡಿಸುತ್ತಿದ್ದಾರೆ ಎಂದು ಲಾಕ್ರಾ ಹೇಳಿದರು. ಸ್ಪೋಟದ ನಂತರ ಕೇಂದ್ರ –ಪೂರ್ವ ವಲಯ ರೈಲ್ವೆ ವ್ಯಾಪ್ತಿಯಲ್ಲಿರುವ ಧನ್‌ಬಾದ್‌ ವಲಯದ ಪಲಮು, ಗಡ್ವಾ ಮತ್ತು ಲತೇಹಾರ್ ಜಿಲ್ಲೆಗಳ ಎಲ್ಲ ಪೊಲೀಸ್‌ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಡಿಐಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.