ತಿರುವನಂತಪುರ: ಆಲಪ್ಪುಳ ಸರ್ಕಾರಿ ಆಸ್ಪತ್ರೆಯು ಭಾನುವಾರ ಮದುವೆಯೊಂದಕ್ಕೆ ವೇದಿಕೆಯಾಗಿದೆ. ವರನಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ, ಇದು ಮದುವೆಯ ಉತ್ಸಾಹವನ್ನು ಕುಗ್ಗಿಸಲಿಲ್ಲ. ನಿಗದಿತ ಸಮಯಕ್ಕೆ ಕೋವಿಡ್ ವಾರ್ಡ್ನಲ್ಲಿಯೇ ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟರು.
ಕೇರಳದ ಆಲಪ್ಪುಳ ಜಿಲ್ಲೆಯ ನಿವಾಸಿಗಳಾತ ಶರತ್ ಮತ್ತು ಅಭಿರಾಮಿ ಹೊಸ ಬದುಕಿಗೆ ಕಾಲಿಟ್ಟ ಜೋಡಿ. ಇದಕ್ಕೂ ಮೊದಲು ಇವರು ಅಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆದುಕೊಂಡಿದ್ದರು. ಸೋಂಕಿನಿಂದಾಗಿ ಅದೇ ವಾರ್ಡ್ಗೆ ದಾಖಲಾಗಿದ್ದ ಶರತ್ ತಾಯಿ ಜಿಜಿ ಅವರು ಮದುವೆಯಲ್ಲಿ ಭಾಗವಹಿಸುವುದು ಸಾಧ್ಯವಾಯಿತು.
ಈ ಇಬ್ಬರ ಮದುವೆಗೆ ಎರಡು ವರ್ಷಗಳ ಹಿಂದೆಯೇ ನಿಶ್ಚಯವಾಗಿತ್ತು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಶರತ್, ಕೋವಿಡ್ ಪರಿಸ್ಥಿತಿಯ ಕಾರಣದಿಂದ ಸ್ವದೇಶಕ್ಕೆ ಮರಳಲು ಆಗಿರಲಿಲ್ಲ. ಅಂತಿಮವಾಗಿ ಕುಟುಂಬದವರು ಭಾನುವಾರಕ್ಕೆ ಮದುವೆ ನಿಗದಿಪಡಿಸಿದ್ದರು.
ಆದರೆ, ಶರತ್ ಮತ್ತು ಅವರ ತಾಯಿ ಇಬ್ಬರಿಗೂ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾದರು. ಹತ್ತಿರದಲ್ಲಿ ಒಳ್ಳೆಯ ಮುಹೂರ್ತ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕುಟುಂಬದವರು ಆಸ್ಪತ್ರೆಯಲ್ಲಿಯೇ ಮದುವೆ ಏರ್ಪಡಿಸಲು ನಿರ್ಧರಿಸಿದರು.
ವಧು ಅಭಿರಾಮಿ ಪಿಪಿಇ ಕಿಟ್ ಧರಿಸಿ ಪಾಲ್ಗೊಂಡಿದ್ದರು. ನವಜೋಡಿ ಪರಸ್ಪರ ಹಾರ ಬದಲಿಸಿಕೊಂಡಿತು. ಆಸ್ಪತ್ರೆಯಲ್ಲಿದ್ದ ಶರತ್ ತಾಯಿ, ಕೆಲ ಸಿಬ್ಬಂದಿ ಹಾಜರಿದ್ದರು. ಮದುವೆಯಾದ ಕೆಲ ಹೊತ್ತಿನಲ್ಲಿಯೇ ವಧು ಆಸ್ಪತ್ರೆಯಿಂದ ನಿರ್ಗಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.