ಲಕನೌ:ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಭಾರತ ಜಾತ್ಯತೀತ ರಾಷ್ಟ್ರ, ಇಲ್ಲಿ ಎಲ್ಲಾ ಬಗೆಯ ಧರ್ಮದ, ಜಾತಿಯ ಪ್ರಜೆಗಳು ವಾಸಮಾಡುತ್ತಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಮುಖ್ಯಸ್ಥೆಮಾಯಾವತಿ ಹೇಳಿದ್ದಾರೆ.
ಈ ರಾಷ್ಟ್ರದಲ್ಲಿ ವಿವಿಧ ಜಾತಿ, ಧರ್ಮದ ಜನರು ಅವರದ್ದೇ ಆದ ಜೀವನ ಶೈಲಿ, ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಹೊಂದಿದ್ದಾರೆ. ಅವುಗಳನ್ನು ನಾವು ಗೌರವಿಸಬೇಕು ಎಂದಿದ್ದಾರೆ.
ಬುಧವಾರ ಹೊಸವರ್ಷದ ಪ್ರಯುಕ್ತ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಬಿಜೆಪಿ ತನ್ನ ಕೋಮುವಾದಿ ನೀತಿಗಳಿಂದ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಪ್ರತಿಭಟನಾಕಾರರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
2019ನೇ ವರ್ಷ ಅತ್ಯಂತ ನೋವು ತಂದ ವರ್ಷ, ಕೇಂದ್ರ ಹಾಗೂ ರಾಜ್ಯಸರ್ಕಾರಗಳಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದಸಂವಿಧಾನ ವಿರೋಧಿ, ಏಕ ಮುಖ ನೀತಿಯಿಂದಾಗಿ ಕೋಮುಗಲಭೆಯನ್ನು ಕಂಡಿರುವ ವರ್ಷ ಎಂದು ಬಣ್ಣಿಸಿದ್ದಾರೆ. ಪ್ರತಿಭಟನೆ ನಡೆಸುವಾಗ ಯಾವುದೇ ಧಾರ್ಮಿಕ ಭಾವನೆಗಳು ಹಾಗೂ ಶಾಂತ ಪರಿಸ್ಥಿತಿ ಕದಡದಂತೆ ಎಚ್ಚರಿಕೆ ವಹಿಸಬೇಕು. 2020ನೇ ವರ್ಷದಲ್ಲಿಇಂತಹ ಯಾವುದೇ ನೋವು ಕಷ್ಟಗಳು ಬಾರದಿರಲಿ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.