ಮಾಯಾವತಿ
ಪಿಟಿಐ
ಲಖನೌ: ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಆತುರದಿಂದ ಜಾರಿಗೆ ತಂದಿದ್ದು, ಪಕ್ಷ ಇದನ್ನು ಬೆಂಬಲಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಸಂಸತ್ತಿನಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮಾತುಗಳನ್ನು ಕೇಳಿದ ಬಳಿಕ, ಮಸೂದೆಯನ್ನು ಅರ್ಥಮಾಡಿಕೊಳ್ಳಲು ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಹೆಚ್ಚಿನ ಸಮಯವನ್ನು ನೀಡಿದ್ದರೆ ಮತ್ತು ಅದನ್ನು ಜಾರಿಗೆ ತರುವ ಮುನ್ನ ಜನರ ಗೊಂದಲಗಳನ್ನು ಪರಿಹರಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂಬುದು ತಿಳಿಯುತ್ತದೆ’ ಎಂದು ಬರೆದುಕೊಂಡಿದ್ದಾರೆ.
ವಕ್ಫ್ ಮಸೂದೆಯನ್ನು ಸರ್ಕಾರ ಆತುರದಿಂದ ಅಂಗೀಕರಿಸಿರುವುದು ದುರದೃಷ್ಟಕರ. ಇದು ಸೂಕ್ತವಲ್ಲ. ಮಸೂದೆಯನ್ನು ಈಗ ಅಂಗೀಕರಿಸಲಾಗಿದೆ, ಸರ್ಕಾರಗಳು ಅದನ್ನು ದುರುಪಯೋಗಪಡಿಸಿಕೊಂಡರೆ, ಬಿಎಸ್ಪಿ ಮುಸ್ಲಿಂ ಸಮುದಾಯದ ಪರವಾಗಿ ನಿಲ್ಲುತ್ತದೆ. ಮಸೂದೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ಲೋಕಸಭೆಯ ಅಂಗೀಕಾರ ಪಡೆದಿರುವ ವಕ್ಫ್ (ತಿದ್ದುಪಡಿ) ಮಸೂದೆಗೆ ರಾಜ್ಯಸಭೆಯು ಇಂದು (ಶುಕ್ರವಾರ) ನಸುಕಿನ 2.30ಕ್ಕೆ ಅಂಗೀಕಾರ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.