ಮಮತಾ ಬ್ಯಾನರ್ಜಿ
ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅರಿಯಾದಾಹಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಗುಂಪು ಹಲ್ಲೆ ಪ್ರಕರಣ ಕುರಿತು ಬಿಜೆಪಿ ಮತ್ತು ಮಾಧ್ಯಮದ ಒಂದು ವಿಭಾಗ ರಾಜ್ಯ ಸರ್ಕಾರವನ್ನು ಹೊಣೆಯಾಗಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ಕುರಿತು ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎರಡು ವರ್ಷಗಳ ಹಿಂದಿನ ಘಟನೆಯ ವಿಡಿಯೊ, ಬಾರಕ್ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅರ್ಜುನ್ ಸಿಂಗ್ ಅವರು ಸಂಸದರಾಗಿದ್ದಾಗ ನಡೆದ ಘಟನೆಯಾಗಿದೆ. ಆದರೆ, ಬುಧವಾರ ಉಪ ಚುನಾವಣೆಗೂ ಮುನ್ನ ಒಂದು ವಿಭಾಗದ ಟಿವಿ ಚಾನಲ್ಗಳು ಬಿಜೆಪಿಯ ಪರವಾಗಿ ಹಳೆಯ ಘಟನೆಯನ್ನೇ ಪುನಾರವರ್ತಿತವಾಗಿ ತೋರಿಸಿವೆ’ ಎಂದು ಅವರು ಹೇಳಿದ್ದಾರೆ.
ಬಂಗಾಳದಲ್ಲಿ ಎದುರಾದ ಸೋಲಿಗೆ ತೇಪೆ ಹಚ್ಚುವ ಸಲುವಾಗಿ ಬಿಜೆಪಿ ಹಾಗೂ ಮಾಧ್ಯಮದ ಒಂದು ವಿಭಾಗ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಅರಿಯಾದಾಹಾದಲ್ಲಿ ಬಾಲಕಿಯ ಮೇಲೆ ಗುಂಪು ಹಲ್ಲೆ ನಡೆಸುತ್ತಿರುವ ಹಳೆಯ ವಿಡಿಯೊವೊಂದು ಇತ್ತೀಚೆಗೆ ಹರಿದಾಡಿದ್ದು, ಪ್ರಕರಣ ಸಂಬಂಧ ಸ್ಥಳೀಯ ಟಿಎಂಸಿ ನಾಯಕ ಮತ್ತು ಪ್ರಮುಖ ಶಂಕಿತ ಜಯಂತ್ ಸಿಂಗ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ವಿಡಿಯೊ ದೃಶ್ಯಾವಳಿಗಳಿಂದ ಎಂಟು ಮಂದಿಯನ್ನು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಾರಕ್ಪುರ ಪೊಲೀಸ್ ಆಯುಕ್ತ ಸಿ.ಪಿ ಅಲೋಕ್ ರಜೋರಿಯಾ ಬುಧವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.