ADVERTISEMENT

ಪರಿವಾರವನ್ನಷ್ಟೇ ಸ್ಮರಿಸುವ ಕಾಂಗ್ರೆಸ್‌: ಮೋದಿ

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ: ವಿರೋಧ ಪಕ್ಷದ ವಿರುದ್ಧ ಮೋದಿ ಟೀಕೆ

ಪಿಟಿಐ
Published 25 ಜೂನ್ 2019, 20:01 IST
Last Updated 25 ಜೂನ್ 2019, 20:01 IST
ಲೋಕಸಭೆಯಲ್ಲಿ ಮಂಗಳವಾರ ಮೋದಿ ಮಾತನಾಡಿದರು
ಲೋಕಸಭೆಯಲ್ಲಿ ಮಂಗಳವಾರ ಮೋದಿ ಮಾತನಾಡಿದರು   

ನವದೆಹಲಿ (ಪಿಟಿಐ): ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪುನಃ ಟೀಕೆಗೆ ಗುರಿಯಾಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಗಾಂಧಿ– ನೆಹರೂ ಪರಿವಾರದವರನ್ನು ಬಿಟ್ಟು ಬೇರೆ ಯಾರ ಕೆಲಸವನ್ನೂ ಆ ಪಕ್ಷ ಗುರುತಿಸುವುದಿಲ್ಲ’ ಎಂದರು.

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಮಂಗಳವಾರ ಉತ್ತರ ನೀಡಿದ ಅವರು, ‘ಮಾಜಿ ಪ್ರಧಾನಿಗಳಾದ ಅಟಲ್‌ಬಿಹಾರಿ ವಾಜಪೇಯಿ ಹಾಗೂ ಪಿ.ವಿ. ನರಸಿಂಹ ರಾವ್‌ ಅವರ ಒಳ್ಳೆಯ ಕೆಲಸಗಳ ಬಗ್ಗೆ ಕಾಂಗ್ರೆಸ್‌ ಎಂದೂ ಮಾತನಾಡಿಲ್ಲ’ ಎಂದರು.

‘ದೇಶದ ಏಳಿಗೆಗೆ ಕೆಲವೇ ಕೆಲವರು ಕಾಣಿಕೆ ನೀಡಿದ್ದಾರೆ ಎಂದು ಕೆಲವರು ಭಾವಿಸುತ್ತಾರೆ. ಅಂಥವರು ಆ ಕೆಲವು ಹೆಸರುಗಳನ್ನು ಮಾತ್ರ ಕೇಳಲು ಬಯಸುತ್ತಾರೆ. ಉಳಿದವರನ್ನು ಕಡೆಗಣಿಸುತ್ತಾರೆ. ಆದರೆ ನಾವು ಬೇರೆ ರೀತಿಯಲ್ಲಿ ಚಿಂತಿಸುತ್ತೇವೆ. ದೇಶದ ಏಳಿಗೆಗೆ ಪ್ರತಿಯೊಬ್ಬ ನಾಗರಿಕನೂ ಕಾಣಿಕೆ ನೀಡಿದ್ದಾನೆ ಎಂದು ನಾವು ಭಾವಿಸುತ್ತೇವೆ’ ಎಂದರು.

ADVERTISEMENT

‘ಈ ಇಡೀ ಚರ್ಚೆಯಲ್ಲಿ ಅವರು (ಕಾಂಗ್ರೆಸ್‌) ಎಂದಾದರೂ ನರಸಿಂಹ ರಾವ್‌ ಅವರ ಕೆಲಸದ ಬಗ್ಗೆ ಮಾತನಾಡಿದರೇ? ಅವರು ಮನಮೋಹನ ಸಿಂಗ್ ಅವರ ಹೆಸರನ್ನೂ ಹೇಳಲಿಲ್ಲ ಎಂದು ಮೋದಿ ಕುಟುಕಿದರು. ತುರ್ತು ಪರಿಸ್ಥಿತಿಯ ದಿನಗಳನ್ನು ಪುನಃ ನೆನಪಿಸುತ್ತಾ, ‘ಅದು ಪ್ರಜಾಪ್ರಭುತ್ವದ ಮೇಲಿನ ಎಂದಿಗೂ ಮಾಸದ ಕಪ್ಪುಚುಕ್ಕೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.