ADVERTISEMENT

ವಿಮಾನಕ್ಕೆ ಬಾಂಬ್‌ ಬೆದರಿಕೆ: ಜಾಮ್‌ನಗರದ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ

ಪಿಟಿಐ
Published 10 ಜನವರಿ 2023, 2:14 IST
Last Updated 10 ಜನವರಿ 2023, 2:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಷ್ಯಾದ ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ಚಾರ್ಟರ್ಡ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದ್ದರಿಂದ ಗುಜರಾತ್‌ನ ಜಾಮ್‌ನಗರದ ಭಾರತೀಯ ವಾಯುಸೇನೆಯ ನೆಲೆಯಲ್ಲಿ ತುರ್ತು ಲ್ಯಾಂಡ್ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಈ ವಿಮಾನದಲ್ಲಿ 236 ಪ್ರಯಾಣಿಕರು ಹಾಗೂ 8 ಮಂದಿ ವಿಮಾನ ಸಿಬ್ಬಂದಿಗಳು ಸೇರಿ ಒಟ್ಟು 244 ಮಂದಿ ಪ್ರಯಾಣಿಸುತ್ತಿದ್ದರು.

ವಾಯು ಸಂಚಾರ ನಿಯಂತ್ರಣ ಕೊಠಡಿ (ಎಟಿಸಿ)ಗೆ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ಹೀಗಾಗಿ ಜಾಮ್‌ನಗರದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ.

ADVERTISEMENT

‘ಎಲ್ಲಾ 236 ಪ್ರಯಾಣಿಕರು ಹಾಗೂ 8 ವಿಮಾನ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರೀಯ ದಳದ ಅಧಿಕಾರಿಗಳು ವಿಮಾನವನ್ನು ಪರಿಶೀಲನೆ ನಡೆಸಿದ್ದಾರೆ‘ ಎಂದು ರಾಜ್‌ಕೋಟ್‌ ಹಾಗೂ ಜಾಮ್‌ನಗರ ವಲಯದ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್ ಅಶೋಕ್‌ ಕುಮಾರ್‌ ಯಾದವ್‌ ತಿಳಿಸಿದ್ದಾರೆ.

ವಿಮಾನವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಏರ್‌ಪೋರ್ಟ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ಅಝುರ್ ಏರ್ ವಿಮಾನದಲ್ಲಿ ಬಾಂಬ್ ಭೀತಿಯ ಬಗ್ಗೆ ಭಾರತೀಯ ಅಧಿಕಾರಿಗಳು ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ವಿಮಾನವನ್ನು ಜಾಮ್‌ನಗರದ ಭಾರತೀಯ ವಾಯುಪಡೆಯ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಮಾನವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ‘ ಎಂದು ರಷ್ಯಾದ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಸ್ಕೋದಿಂದ ಟೇಕಾಫ್‌ ಆಗಿದ್ದ ಈ ವಿಮಾನವು ಡಬೋಲಿಮ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಆಗಬೇಕಿತ್ತು. ಸದ್ಯ ಡಬೋಲಿಮ್‌ ಏರ್‌ಪೋರ್ಟ್‌ನ ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.