ಮುಂಬೈ: ಮುಂಬೈಯ ಸುಪ್ರಸಿದ್ದ ಲಾಲ್ಬಾಗ್ಚಾ ರಾಜ ಗಣೇಶೋತ್ಸವ ಈ ವರ್ಷನಡೆಯುವುದಿಲ್ಲ. ಸಾಂಪ್ರದಾಯಿಕ ಗಣೇಶ ಪೂಜೆಯ ಬದಲು ಈ ಬಾರಿ ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸಲಾಗಿದೆ.
ದೇಶಕ್ಕೆ ದೇಶವೇ ಕೊರೊನಾವೈರಸ್ನಿಂದ ತತ್ತರಿಸಿರುವ ಈ ಹೊತ್ತಲ್ಲಿ ಗಣೇಶೋತ್ಸವದ ಬದಲು ಆರೋಗ್ಯ ಉತ್ಸವ ನಡೆಯಲಿದೆ ಎಂದು ಲಾಲ್ಬಾಗ್ಚಾ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಎಜಿಎಂ ಹೇಳಿದ್ದಾರೆ.
ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹25 ಲಕ್ಷ ದೇಣಿಗೆ ನೀಡುವುದಾಗಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸುಧೀರ್ ಸಾಲ್ವಿ ಹೇಳಿದ್ದಾರೆ.
ಲಾಲ್ಬಾಗ್ಚಾ ರಾಜ ಬಗ್ಗೆ ಜನರಿಗೆ ವಿಶ್ವಾಸ ಜಾಸ್ತಿ. ಜನರು ಬರಬಹುದು. ನಾವು ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಅದೇ ವೇಳೆ 4 ಅಡಿ ಎತ್ತರದ ಗಣೇಶನ ಮೂರ್ತಿ ಕೂರಿಸುತ್ತಿರಾ? ಎಂದು ಕೇಳಿದಾಗ ಇಲ್ಲ ಎಂದ ಸಾಲ್ವಿ, ಅದೇ ಜಾಗದಲ್ಲಿ ರಕ್ತದಾನ ಮತ್ತು ಪ್ಲಾಸ್ಮಾ ದಾನ ಶಿಬಿರ ಆಯೋಜಿಸುವುದಾಗಿ ಹೇಳಿದ್ದಾರೆ.
ದೇಶಕ್ಕಾಗಿ ಹುತಾತ್ಮರಾದ ಯೋಧರ ಕುಟುಂಬ ಮತ್ತು ಕೋವಿಡ್ ಸೇನಾನಿಗಳ ಕುಟುಂಬಗಳಿಗೆ ಗೌರವಾದರಗಳೊಂದಿಗೆ ಸನ್ಮಾನ ಮಾಡಲು ನಾವು ತೀರ್ಮಾನಿಸಿದ್ದೇವೆ. ಲಾಲ್ಬಾಗ್ಚಾ ರಾಜ ಗಣೇಶೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಗಣೇಶನ ಮೂರ್ತಿ ಕೂರಿಸದೇ ಇರುವುದು ಎಂದು ಅವರು ಹೇಳಿದ್ದಾರೆ.
ರಕ್ತ ಮತ್ತು ಪ್ಲಾಸ್ಮಾ ದಾನ ಶಿಬಿರ ಮುಂಬೈಯ ಪರೇಲ್ನಲ್ಲಿರುವ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯ ಸಹಕಾರದೊಂದಿಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.