ADVERTISEMENT

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕನ ಟ್ವೀಟ್‌: ಲೊಕೆಷನ್‌ ಪತ್ತೆ ಮಾಡಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 2:58 IST
Last Updated 1 ಆಗಸ್ಟ್ 2021, 2:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿ, ಆತ್ಮಹತ್ಯೆಯ ಸೂಚನೆ ನೀಡಿದ್ದ ಕೇರಳದ ಡಿಪ್ಲೊಮಾ ವಿದ್ಯಾರ್ಥಿಯೊಬ್ಬನನ್ನು ಮುಂಬೈನ ದಾದರ್ ಹೋಟೆಲ್‌ನಲ್ಲಿ ಪೊಲೀಸರು ರಕ್ಷಿಸಿದ್ದಾರೆ.

ಖಿನ್ನತೆಗೊಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ತನ್ನ ಉದ್ದೇಶದ ಬಗ್ಗೆ ಟ್ವೀಟ್ ಮಾಡಿದ್ದಾನೆ ಎಂದು ಪತ್ರಕರ್ತರೊಬ್ಬರು ಮುಂಬೈ ಕೇಂದ್ರ ಸೈಬರ್ ಪೊಲೀಸ್ ಠಾಣೆಗೆ ವಾಟ್ಸಾಪ್ ಮೂಲಕ ಶನಿವಾರ ಬೆಳಿಗ್ಗೆ ಮಾಹಿತಿ ನೀಡಿದ್ದರು.

‘ಮಾಹಿತಿ ಬಂದ ನಂತರ, ನಾವು ಆ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದೆವು. ಆತ ದಾದರ್‌ನಲ್ಲಿರುವ ಒಂದು ಐಷಾರಾಮಿ ಹೋಟೆಲ್‌ನಲ್ಲಿರುವುದಾಗಿ ಪತ್ತೆಯಾಯಿತು. ಇನ್ಸ್‌ಪೆಕ್ಟರ್ ಸಂಜಯ್ ಗೋವಿಲ್ಕರ್ ಮತ್ತು ಹೋಟೆಲ್ ಮ್ಯಾನೇಜರ್ ನೇತೃತ್ವದ ತಂಡ ಪರ್ಯಾಯ ಕೀಲಿಕೈ ಬಳಸಿ ಕೊಠಡಿ ಪ್ರವೇಶಿಸಿತ್ತು. ಖಿನ್ನತೆಗೊಳಗಾಗಿದ್ದ ವ್ಯಕ್ತಿಯು ಕೊಠಡಿಯಲ್ಲಿ ಚಾಕುವಿನೊಂದಿಗೆ ಪತ್ತೆಯಾಗಿದ್ದಾನೆ,’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಪ್ರೀತಿಸಿದ ಗೆಳತಿ ಮದುವೆಯಾಗದಿರಲು ನಿರ್ಧರಿಸಿದ ಕಾರಣ ವ್ಯಕ್ತಿ ಖಿನ್ನತೆಗೆ ಜಾರಿದ್ದ,‘ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಹೋಟೆಲ್‌ಗೆ ಬಂದಿದ್ದ ಯುವಕ ಕೊಠಡಿ ಪಡೆದುಕೊಂಡಿದ್ದ. ಆತನನ್ನು ಆಪ್ತಸಮಾಲೋಚಕರ ಬಳಿಗೆ ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.