ಮಂಡ್ಯ: ಬಹುಜನ ಸಮಾಜ ಪಕ್ಷದಿಂದ ಚುನಾವಣಾ ರಾಜಕಾರಣ ಆರಂಭಿಸಿದ ಕೆ.ಸಿ.ನಾರಾಯಣಗೌಡ ಬಿಜೆಪಿಯಿಂದ ಗೆದ್ದು ಮೊದಲ ಬಾರಿಗೆ ಸಚಿವ ಪಟ್ಟ ಅಲಂಕರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ಖಾತೆ ತೆರೆಯುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಜೆಡಿಎಸ್–ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಜಿಲ್ಲೆಯಲ್ಲಿ ಈಗ ಬಿಜೆಪಿ ದರ್ಬಾರ್ ಆರಂಭವಾಗಿದೆ.
ಟ್ರಸ್ಟ್ ಮೂಲಕ ರಾಜಕಾರಣ: ಸಂತೇಬಾಚಹಳ್ಳಿ ಹೋಬಳಿ ಕೈಗೋನಹಳ್ಳಿಯವರಾದ ಕೆ.ಸಿ.ನಾರಾಯಣಗೌಡರು ಚಿಕ್ಕವರಾಗಿದ್ದಾಗಲೇ ಮುಂಬೈನಲ್ಲಿ ಜೀವನ ಕಂಡುಕೊಂಡಿದ್ದರು. ನಂತರ ಅವರು ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡರು. 2000 ಇಸವಿಯ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅವರು ತಮ್ಮ ತಂದೆಯ ಹೆಸರಿನಲ್ಲಿ ಟ್ರಸ್ಟ್ ರಚಿಸಿ ವಿವಿಧ ಸೇವಾ ಕಾರ್ಯ ಕೈಗೊಂಡರು.
ಶಾಲೆಗಳಿಗೆ ಉಪಕರಣ ವಿತರಣೆ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ ಮೇಳ, ಚಾಲನಾ ಪರವಾನಗಿ ರ್ಯಾಲಿ ಮುಂತಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರು ಗುರುತಿಸಿಕೊಂಡಿದ್ದರು. 2008ರ ವಿಧಾನ ಸಭಾ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಬಿಎಸ್ಪಿಯಿಂದ ಸ್ಪರ್ಧಿಸಿ ಸೋಲುಂಡರು. ನಂತರ ಅವರು ಜೆಡಿಎಸ್ ಅಂಗಳ ಸೇರಿದರು. 2013ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.