ADVERTISEMENT

ಮೋದಿ–ಕೇಜ್ರಿವಾಲ್ ಒಂದೇ ನಾಣ್ಯದ ಎರಡು ಮುಖಗಳು: ಅಸಾದುದ್ದೀನ್ ಓವೈಸಿ

ಪಿಟಿಐ
Published 24 ಜನವರಿ 2025, 5:19 IST
Last Updated 24 ಜನವರಿ 2025, 5:19 IST
<div class="paragraphs"><p>ಅಸಾದುದ್ದೀನ್ ಓವೈಸಿ </p></div>

ಅಸಾದುದ್ದೀನ್ ಓವೈಸಿ

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೂ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ, ಅವರು ಒಂದೇ ಬಟ್ಟೆಯ ತುಂಡುಗಳು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

‘ಮೋದಿ ಹಾಗೂ ಕೇಜ್ರಿವಾಲ್ ಸಹೋದರರು ಇದ್ದಂತೆ, ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಆರ್‌ಎಸ್‌ಎಸ್‌ ಸಿದ್ಧಾಂತದಿಂದಲೇ ಪ್ರವರ್ಧಮಾನಕ್ಕೆ ಬಂದವರು. ಒಬ್ಬರು ಶಾಖೆಯಿಂದ ಬಂದವರು, ಇನ್ನೊಬ್ಬರು ಅದರ ಸಂಸ್ಥೆಗಳಿಂದ ಬಂದರು’ ಎಂದು ಓವೈಸಿ ಟೀಕೆ ಮಾಡಿದ್ದಾರೆ.

ADVERTISEMENT

ಅವರು ಓಕ್ಲಾ ವಿಧಾನಸಭೆ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಶಿಫ–ಉರ್–ರೆಹಮಾನ್ ಪರ ಪ್ರಚಾರ ನಡೆಸಿದರು.

ಶಹೀನ್‌ಬಾಗ್‌ನಲ್ಲಿ ಪಾದಯಾತ್ರೆ ನಡೆಸಿದ ಓವೈಸಿ, ಫೆ. 5ರಂದು ನಡೆಯುವ ಚುನಾವಣೆಯಲ್ಲಿ ‘ಗಾಳಿಪಟ’ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಎರಡು ಕ್ಷೇತ್ರದಲ್ಲಿ ಎಐಎಂಐಎಂ ಸ್ಪರ್ಧೆ ಮಾಡುತ್ತಿದೆ. ಮುಸ್ತಫಾಬಾದ್ ಕ್ಷೇತ್ರದಿಂದ ತಾಹಿರ್ ಹುಸೇನ್ ಹಾಗೂ ಓಕ್ಲಾ ಕ್ಷೇತ್ರದಿಂದ ಶಿಫ–ಉರ್–ರೆಹಮಾನ್ ಕಣದಲ್ಲಿದ್ದಾರೆ. 2020ರ ದೆಹಲಿ ಗಲಭೆ ಪ್ರಕರಣ ಸಂಬಂಧ ಉಭಯ ಅಭ್ಯರ್ಥಿಗಳೂ ಜೈಲಿನಲ್ಲಿದ್ದಾರೆ.

ಭಾಷಣದ ವೇಳೆ ನ್ಯಾಯಿಕ ವ್ಯವಸ್ಥೆಯಲ್ಲಿರುವ ತಾರತಮ್ಯದ ನೀತಿಯನ್ನೂ ಅವರು ಪ್ರಶ್ನೆ ಮಾಡಿದ್ದಾರೆ. ‘ಅಬಕಾರಿ ನೀತಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ತಾಹಿರ್ ಹುಸೇನ್ ಮತ್ತು ಶಿಫ–ಉರ್–ರೆಹಮಾನ್‌ಗೆ ಯಾಕೆ ಜಾಮೀನು ಸಿಕ್ಕಿಲ್ಲ? ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಸೇರಿ ಇವರ ನಾಯಕರಿಗೆಲ್ಲಾ ಜಾಮೀನು ಸಿಕ್ಕಿದೆ. ಆದರೆ ಇವರಿಬ್ಬರು ಇನ್ನೂ ಜೈಲಿನಲ್ಲೇ ಇದ್ದಾರೆ. ಇವರು ಮಾಡಿದ ತಪ್ಪಾದರೂ ಏನು’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.