ADVERTISEMENT

ನೌಕಾ ದಳ ದಿನ: ಸಾಗರ ವಲಯದ ರಕ್ಷಕರಿಗೆ ಗೌರವ, ಸ್ಮರಣೆ

ಏಜೆನ್ಸೀಸ್
Published 4 ಡಿಸೆಂಬರ್ 2018, 10:17 IST
Last Updated 4 ಡಿಸೆಂಬರ್ 2018, 10:17 IST
   

ನವದೆಹಲಿ: 1971ರ ಇಂಡೋ–ಪಾಕ್‌ ಯುದ್ಧದ ಸಂದರ್ಭದಲ್ಲಿ ಭಾರತೀಯ ನೌಕಾ ದಳ ಸಮುದ್ರ ವಲಯದಲ್ಲಿ ನಡೆಸಿದ ಕಾರ್ಯಾಚರಣೆಗಳ ಗೌರವಾರ್ಥ ಪ್ರತಿ ವರ್ಷ ಡಿಸೆಂಬರ್‌ 4ರಂದು ’ನೌಕಾ ದಳ ದಿನ’ವಾಗಿ ಆಚರಿಸಲಾಗುತ್ತಿದೆ.

ಪಾಕಿಸ್ತಾನದ ಸಬ್‌ಮೆರಿನ್‌ಪಿಎನ್‌ಎಸ್‌ ಗಾಜಿ ಭಾರತದ ಪೂರ್ವ ಕರಾವಳಿಸಮೀಪದಲ್ಲಿ ಮುಳುಗಡೆಯಾಗಿದ್ದು 1971ರ ಯುದ್ಧದ ಸಮಯದಲ್ಲಿಯೇ. ದೇಶದ ಸಾಗರ ಗಡಿ ವಲಯದಲ್ಲಿ ರಕ್ಷಣೆ ಹಾಗೂ ಲೋಕೋಪಯೋಗಿ ಯೋಜನೆಗಳು, ವಿಪತ್ತು ನಿರ್ವಹಣೆ, ಜಂಟಿ ಅಭ್ಯಾಸಗಳ ಮೂಲಕ ಇತರೆ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿಯೂ ನೌಕಾ ದಳ ದಿನದ ಆಚರಣೆ ಮುಂದುವರಿದಿದೆ.

ಭಾರತೀಯ ಶಸಸ್ತ್ರ ಪಡೆಗಳ ಸಮುದ್ರ ವಲಯದ ಕಾರ್ಯಾಚರಣೆ ನಡೆಸುವ ನೌಕಾ ದಳಕ್ಕೆ ದೇಶದ ರಾಷ್ಟ್ರಪತಿ ಮುಖ್ಯಸ್ಥ (ಕಮಾಂಡರ್‌–ಇನ್‌–ಚೀಪ್‌) ರಾಗಿರುತ್ತಾರೆ.ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿ ಭೋಸಲೇ ಅವರನ್ನು ’ಭಾರತದ ನೌಕಾ ದಳದ ಜನಕ’ ಎಂದೇ ಪರಿಗಣಿಸಲಾಗಿದೆ.

ADVERTISEMENT

ನೌಕಾ ದಳ ದಿನದಂದು ಸಾಗರ ವಲಯದ ರಕ್ಷಕರಿಗೆ ದೇಶದಾದ್ಯಂತ ಗೌರವ ಸಲ್ಲಿಸಲಾಗುತ್ತದೆ. ದೇಶದ ಪ್ರಮುಖರು ಟ್ವೀಟ್‌ಗಳ ಮೂಲಕ ಗೌರವ ಸಲ್ಲಿಸಿದ್ದಾರೆ. ವ್ಯಾಪಾರ–ವಹಿವಾಟು ನಿರಾತಂಕವಾಗಿ ಸಾಗಲು ಸಮುದ್ರ ಭಾಗದ ರಕ್ಷಣೆಯಲ್ಲಿ ತೊಡಗಿರುವ, ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆಗೆ ದಾವಿಸುವ ಭಾರತೀಯ ನೌಕಾ ದಳದ ರಕ್ಷಕರಿಗೆ ಶುಭಾಶಯಗಳನ್ನು ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಪಂಜಾಬ್‌ ಸಿಎಂ ಕ್ಯಾಪ್ಟನ್‌ ಅಮರಿಂದರ್ ಸಿಂಗ್‌ ಹಾಗೂ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿ ಅನೇಕರು ಗೌರವ ಸೂಚಿಸಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.