ADVERTISEMENT

ಮುಂಬೈ ರೈಲು ಸ್ಫೋಟ: ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿಲ್ಲವೆಂದ ಗುಪ್ತಚರ ಇಲಾಖೆ

ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಗುಪ್ತಚರ ಇಲಾಖೆ

ಪಿಟಿಐ
Published 14 ಏಪ್ರಿಲ್ 2021, 10:01 IST
Last Updated 14 ಏಪ್ರಿಲ್ 2021, 10:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘2006ರ ಮುಂಬೈ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವರದಿಯನ್ನು ತಯಾರಿಸಿಲ್ಲ ಅಥವಾ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿಲ್ಲ ಎಂದು ಗುಪ್ತಚರ ಇಲಾಖೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

‘ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ಅಥವಾ ಜುಲೈ 11, 2006ರಂದು ಬಾಂಬ್ ಸ್ಫೋಟ ಸಂಭವಿಸಿದ ನಂತರದಲ್ಲಾಗಲಿ ಯಾವುದೇ ವರದಿಯನ್ನು ಸಿದ್ಧಪಡಿಸಿಲ್ಲ ಅಥವಾ ಗೃಹ ಸಚಿವಾಲಯಕ್ಕೂ ಸಲ್ಲಿಸಿಲ್ಲ ಎಂದು ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರದ ವಕೀಲ ರಾಹುಲ್‌ ಶರ್ಮಾ ಮೂಲಕ ಸಲ್ಲಿಸಿರುವ ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ‘ ಎಂದು ಗುಪ್ತಚರ ಇಲಾಖೆ ಕೋರ್ಟ್‌ಗೆ ತಿಳಿಸಿದೆ.

ಮುಂಬೈನ ವೆಸ್ಟರ್ಸ್‌ ಲೈನ್‌ನಲ್ಲಿ ಸಂಚರಿಸುವ ರೈಲುಗಳಲ್ಲಿ 2006ರ ಜುಲೈ 11ರಂದು ಏಳು ಆರ್‌ಡಿಎಕ್ಸ್‌ ಬಾಂಬ್‌ ಸ್ಫೋಟಗೊಂಡು 189 ಮಂದಿ ಮೃತಪಟ್ಟಿದ್ದರು. 829 ಮಂದಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ನಡೆಸಿದೆ ಎಂದು ಗುಪ್ತಚರ ಇಲಾಖೆ ಪರ ವಕಾಲತ್ತು ವಹಿಸಿರುವ ವಕೀಲ ಸಿ ಕೆ ಭಟ್ ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ‘ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 2009ರಲ್ಲಿ ಯಾವುದೇ ವರದಿಯನ್ನು ಸಿದ್ಧಪಡಿಸಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ ದಾಖಲಿಸುವಂತೆ ಜನವರಿ 27ರಂದು ಗುಪ್ತಚರ ಇಲಾಖೆಗೆ (ಐಬಿ) ನಿರ್ದೇಶನ ನೀಡಿದ್ದರು. ಈ‌ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿರುವ ಎಹ್ತೇಶಾಮ್‌ ಕುತ್ಬುದ್ದೀನ್‌ ಸಿದ್ದಿಖಿ ಅವರು ಸಲ್ಲಿಸಿದ ಮನವಿಗೆ ಸಂಬಂಧಿಸಿ ನ್ಯಾಯಾಲಯ ಈ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.