ನವದೆಹಲಿ:ಅಯೋಧ್ಯೆಯ ವಿವಾದಿತ ಭೂಪ್ರದೇಶವನ್ನು ಹಂಚಿಕೆ ಮಾಡಿದ್ದರ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಹೊಸ ನ್ಯಾಯಪೀಠಕ್ಕೆ ವರ್ಗಾಯಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಮೇಲ್ಮನವಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಒಂದೇ ನಿಮಿಷದಲ್ಲಿ ಇಂದಿನ ವಿಚಾರಣೆ ಪೂರ್ಣಗೊಳಿಸಿತು. ಜತೆಗೆ, ಮುಂದಿನ ವಿಚಾರಣೆಯನ್ನು ಹೊಸ ನ್ಯಾಯಪೀಠ ಇದೇ 10ರಿಂದ ಆರಂಭಿಸಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಮಂದಿರಕ್ಕೆ ತಕ್ಷಣ ಸುಗ್ರೀವಾಜ್ಞೆ ಇಲ್ಲ: ಮೋದಿ
ವಿವಾದಿತ ಭೂಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. 2018ರ ಅಕ್ಟೋಬರ್ 29ರಂದು ಇವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು 2019ರ ಜನವರಿ 4ರಂದು ನಡೆಸುವುದಾಗಿ ಹೇಳಿತ್ತು.
ತುರ್ತು ವಿಚಾರಣೆಗೆ ನಕಾರ
ಅಯೋಧ್ಯೆ ಪ್ರಕರಣವನ್ನು ದಿನಂಪ್ರತಿ ವಿಚಾರಣೆ ನಡೆಸಿ ಶೀಘ್ರ ತೀರ್ಪು ನೀಡಬೇಕು ಎಂದು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಕೀಲ ಹರಿನಾಥ್ ರಾಮ್ ಎಂಬುವವರು 2018ರ ನವೆಂಬರ್ನಲ್ಲಿಪಿಐಎಲ್ ಸಲ್ಲಿಸಿದ್ದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.