ನವದೆಹಲಿ: ಕೋವಿಡ್–19 ವಿರುದ್ಧದ ಲಸಿಕೆಯ ಎರಡು ಡೋಸ್ ಪಡೆದುಕೊಂಡವರಿಗೆ ಬೂಸ್ಟರ್ ಡೋಸ್ನಿಂದ ಹೆಚ್ಚಿನ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವೇನೂ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ನ (ಐಸಿಎಂಆರ್) ಮಹಾ ನಿರ್ದೇಶಕ ಡಾ. ಬಲರಾಂ ಭಾರ್ಗವ ಸೋಮವಾರ ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಅರ್ಹತೆ ಇರುವ ಎಲ್ಲರಿಗೂ ಲಸಿಕೆ ನೀಡಿಕೆಯು ಸರ್ಕಾರದ ಆದ್ಯತೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಲಸಿಕೆ ನೀಡಿಕೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್ಟಿಎಜಿಐ) ಮುಂದಿನ ಸಭೆಯಲ್ಲಿ ಬೂಸ್ಟರ್ ಡೋಸ್ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಜನರು ಮಾತ್ರವಲ್ಲ, ಜಗತ್ತಿನ ಎಲ್ಲರಿಗೂ ಲಸಿಕೆಯ ಎರಡು ಡೋಸ್ ಸಿಗುವಂತೆ ನೋಡಿಕೊಳ್ಳಲು ಭಾರತ ಬಯಸಿದೆ’ ಎಂದು ಭಾರ್ಗವ ಹೇಳಿದ್ದಾರೆ.
ಅಗತ್ಯಕ್ಕೆ ಬೇಕಾದಷ್ಟು ಲಸಿಕೆಗಳ ಸಂಗ್ರಹ ಇದೆ. ಎಲ್ಲ ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕಿಸುವಿಕೆ ಪೂರ್ಣಗೊಳಿಸುವುದು ಸರ್ಕಾರದ ಗುರಿ. ಅದಾದ ಬಳಿಕವೇ ಬೂಸ್ಟರ್ ಡೋಸ್ ಬಗ್ಗೆ ಯೋಚನೆ ಮಾಡಲಾಗುವುದು. ಪರಿಣತರ ಶಿಫಾರಸು ಆಧಾರದಲ್ಲಿಯೇ ಬೂಸ್ಟರ್ ಡೋಸ್ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇತ್ತೀಚೆಗೆ ಹೇಳಿದ್ದರು.
ಅಧಿಕಾರಿಗಳು ಹೇಳಿರುವಂತೆ, ಲಸಿಕೆ ಹಾಕಿಸಿಕೊಳ್ಳಲು ಅರ್ಹತೆ ಇರುವ ಶೇ 82ರಷ್ಟು ಜನರಿಗೆ ಮೊದಲ ಡೋಸ್ ಮತ್ತು ಶೇ 43ರಷ್ಟು ಜನರಿಗೆ ಎರಡನೇ ಡೋಸ್ ಹಾಕಲಾಗಿದೆ. ಲಸಿಕೆಯ ಒಟ್ಟು 116.87 ಕೋಟಿ ಡೋಸ್ಗಳನ್ನು ಜನರಿಗೆ ಹಾಕಲಾಗಿದೆ.12 ಕೋಟಿ ಜನರು ಲಸಿಕೆಯ ಎರಡನೇ ಡೋಸ್ ಅನ್ನು ನಿಗದಿತ ಅವಧಿಯೊಳಗೆ ಹಾಕಿಸಿಕೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.