ಸೇಲಂ (ತಮಿಳುನಾಡು): ‘ಇಂಡಿಯಾ’ ಮೈತ್ರಿಕೂಟದಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅದರ ಕಳಪೆ ಸಾಧನೆ ಆ ಮೈತ್ರಿಕೂಟ ಅಸ್ತಿತ್ವದಲ್ಲಿಯೇ ಎಂದು ಆಶ್ಚರ್ಯಪಡುವಂತೆ ಮಾಡಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟವಿದೆಯೇ? ಮೈತ್ರಿಕೂಟದಲ್ಲಿ ಯಾವುದೇ ಒಗ್ಗಟ್ಟು ಇಲ್ಲ. ಆ ಮೈತ್ರಿಕೂಟ ಅಸ್ತಿತ್ವದಲ್ಲಿದೆಯೇ ಎಂಬ ಬಗ್ಗೆ ಸಂದೇಹವಿದೆ. ದೆಹಲಿಯ ಜನರು ಆಡಳಿತ ಬದಲಾವಣೆ ಬಯಸಿದ್ದರಿಂದ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಗೆದ್ದಿದೆ ಎಂದು ತಿಳಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಫೆಬ್ರುವರಿ 8ರಂದು (ಶನಿವಾರ) ಪ್ರಕಟಗೊಂಡಿದೆ. ಬಿಜೆಪಿ 48 ಸ್ಥಾನಗಳನ್ನು ಗೆದ್ದು 26 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮತ್ತೊಂದೆಡೆ ಆಡಳಿತಾರೂಢ ಎಎಪಿಗೆ ಅಧಿಕಾರ ನಷ್ಟವಾಗಿದ್ದು, 22 ಸ್ಥಾನಗಳಿಗೆ ಸೀಮಿತಗೊಂಡಿದೆ.
ಈರೋಡ್ ಉಪಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಗೆಲುವಿನ ಕುರಿತು ಮಾತನಾಡಿದ ಪಳನಿಸ್ವಾಮಿ, ‘ಗೆಲುವು ನಿಜವಾದದ್ದಲ್ಲ. ಬದಲಾಗಿ ಮೋಸದ ಮೂಲಕ ಗೆಲುವು ಸಾಧಿಸಿದೆ. 2026ರ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಬಲವಾದ ಮೈತ್ರಿಕೂಟ ರೂಪಿಸಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.