ADVERTISEMENT

ಲೋಕಸಭಾ ಚುನಾವಣೆಯ ಜತೆಗೆ J&K ವಿಧಾನಸಭಾ ಚುನಾವಣೆಯನ್ನೂ ನಡೆಸಲು ಒಮರ್‌ ಆಗ್ರಹ

ಪಿಟಿಐ
Published 1 ಫೆಬ್ರುವರಿ 2024, 13:21 IST
Last Updated 1 ಫೆಬ್ರುವರಿ 2024, 13:21 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ: ‘‘ಒಂದು ದೇಶ, ಒಂದು ಚುನಾವಣೆ’ ಎಂಬ ಘೋಷಣೆಯನ್ನು ಬಿಜೆಪಿ ನಿಜಕ್ಕೂ ನಂಬಿದ್ದರೆ, ಲೋಕಸಭಾ ಚುನಾವಣೆಯ ಜತೆಯಲ್ಲೇ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನೂ ನಡೆಸಲಿ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಗುರುವಾರ ಆಗ್ರಹಿಸಿದ್ದಾರೆ.

ಸೌದಿ ಅರೇಬಿಯಾದಿಂದ ಮರಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಿರಂತರವಾಗಿ ‘ಒಂದು ದೇಶ, ಒಂದು ಚುನಾವಣೆ’ ಕುರಿತು ಮಾತನಾಡುತ್ತಿವೆ. ಈ ಕುರಿತಂತೆ ಅವರ ವರದಿಯೂ ಸಿದ್ಧವಾಗಿದೆ. ಅವರು ಅದನ್ನು ನಂಬಿದ್ದರೆ ಚುನಾವಣೆ ನಡೆಸಲಿ. ಒಂದೊಮ್ಮೆ ನಡೆಸದೇ ಇದ್ದಲ್ಲಿ, ಬಿಜೆಪಿಯವರು ಜನರಿಗೆ ದ್ರೋಹ ಎಸಗುವ ಹಿಂದಿನ ಚಾಳಿಯನ್ನೇ ಮುಂದುವರಿಸಿದ್ದಾರೆ ಎಂದಷ್ಟೇ ಹೇಳಬಹುದು’ ಎಂದಿದ್ದಾರೆ.

ಮೆಕ್ಕಾ ಯಾತ್ರೆ ಕೈಗೊಂಡ ಅವರು ತಮ್ಮ ತಂದೆ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಸ್ವದೇಶಕ್ಕೆ ಮರಳಿದರು. ‘ಜನರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಜತೆಗೆ ಬರ ನೀಗಿಸುವಂತೆಯೂ ಕೇಳಿಕೊಂಡಿದ್ದೇವೆ. ನಮ್ಮ ಪ್ರಾರ್ಥನೆ ದೇವರಿಗೆ ಒಪ್ಪಿಗೆಯಾಗಿದೆ. ರಾಜ್ಯದಲ್ಲಿ ಮಳೆ ಹಾಗೂ ಹಿಮ ಸುರಿಯುತ್ತಿದೆ’ ಎಂದಿದ್ದಾರೆ.

ADVERTISEMENT

ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಒಮರ್, ‘ಚುನಾವಣೆ ಹೊಸ್ತಿಲಲ್ಲಿ ಮಂಡಿಸಿರುವ ಇದು ಪೂರ್ಣ ಬಜೆಟ್ ಅಲ್ಲ. ಚುನಾವಣೆ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂಬುದು ಮೊದಲೇ ಗೊತ್ತಿದ್ದ ಸಂಗತಿ. ಈ ಬಜೆಟ್ ಆಧರಿಸಿ ಜನರು ಮತ ಹಾಕರು. ಕಳೆದ ಐದು ವರ್ಷಗಳಲ್ಲಿ ಏನೂ ಆಗಿಲ್ಲ ಎಂಬುದು ಜನರಿಗೂ ಗೊತ್ತು. ಅದನ್ನು ಆಧರಿಸಿಯೇ ಅವರು ಮತ ಹಾಕುತ್ತಾರೆ’ ಎಂದು ಒಮರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.