ನವದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಮುಂಜಾನೆ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ಪ್ರಮುಖವಾಗಿ ಪಾಕಿಸ್ತಾನದ ಗಡಿಯಲ್ಲಿರುವ ಮುರಿಡ್ಕೆಯನ್ನೇ ಗುರಿಯಾಗಿಸಿದೆ.
ಲಷ್ಕರ್ ಎ ತಯಬಾ ಸಂಘಟನೆಯ ಮುಖ್ಯಕಚೇರಿ ಇರುವ ಮುರಿಡ್ಕೆ ಪ್ರದೇಶವನ್ನು ಭಯೋತ್ಪಾದನೆಯ ನರ್ಸರಿ ಎಂದೇ ಕರೆಯಲಾಗುತ್ತದೆ. ಮಕ್ಕಳು, ಯುವಕರನ್ನೇ ಗುರಿಯಾಗಿಸಿ ತರಬೇತಿ ನೀಡುವ ಕೇಂದ್ರವಿದು. ಹಲವು ದಶಕಗಳಿಂದ ಇಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ತರಬೇತಿ ನೀಡಲಾಗುತ್ತಿದೆ.
ಮುರಿಡ್ಕೆಯಲ್ಲಿ ‘ಮರ್ಕಜ್’ ಎಂಬ ಧಾರ್ಮಿಕ ಬೋಧನೆಯ ಕೇಂದ್ರವಿದ್ದು, ಬಾಹ್ಯಕ್ಕೆ ಇದು ಧಾರ್ಮಿಕ ದತ್ತಿ ಸಂಸ್ಥೆಯಂತೆ ಕಾಣುತ್ತದೆ. ಆದರೆ ಅಸಲಿಯಲ್ಲಿ ಭಯೋತ್ಪಾದಕರ ತರಬೇತಿ ಕೇಂದ್ರವಾಗಿದೆ. ಹೀಗಾಗಿ ಭಾರತದ ವಿರುದ್ಧ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯಗಳ ಹಿಂದೆ ಮುರಿಡ್ಕೆ ಕೇಂದ್ರದ್ದೇ ಪ್ರಮುಖ ಪಾತ್ರ ಇರುವುದನ್ನು ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿ ವರದಿಯಾಗಿವೆ.
ಲಷ್ಕರ್ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ನ ಪ್ರಮುಖ ತಾಣವೂ ಇದೇ ಆಗಿದೆ. ಈ ಕೇಂದ್ರವು ಅಲ್ ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿತ್ತು. ಒಸಾಮಾ ಬಿನ್ ಲಾಡನ್ ಮಾರ್ಗದರ್ಶನದಲ್ಲಿ ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯ ನಡೆಸಿವೆ. ಇದರಲ್ಲಿ 26/11 ಮುಂಬೈ ದಾಳಿಯೂ ಒಳಗೊಂಡಿದೆ.
ಮುರಿಡ್ಕೆ ಮರ್ಕಾಜ್ನಲ್ಲಿ ಕೈಗೊಳ್ಳುವ ಯಾವುದೇ ಭಯೋತ್ಪಾದಕ ಕೃತ್ಯ ಹಾಗೂ ಯೋಜನೆಗಳ ಹಿಂದಿನ ರೂವಾರಿಯೇ ಲಷ್ಕರ್ ಎ ತಯಬಾದ ಸಂಸ್ಥಾಪಕ ಮುಖಂಡ ಹಫೀಜ್ ಮೊಹಮ್ಮದ್ ಸಯೀದ್. ತನ್ನ ಸಿದ್ಧಾಂತ ಮತ್ತು ರಚನಾತ್ಮಕ ಯೋಜನೆಗಳ ಮೂಲಕ ಸಂಘಟನೆ ಕಟ್ಟಿದ ಸಯೀದ್ನಿಂದಾಗಿ ಮುರಿಡ್ಕೆ ಪ್ರದೇಶವು ಲಷ್ಕರ್ನ ಪ್ರಮುಖ ಕೇಂದ್ರವಾಗಿ ಬೆಳೆಯಿತು. ಸಂಘಟನೆಗೆ ನೇಮಕ, ತರಬೇತಿ ಮತ್ತು ಯೋಜನೆಗಳು ಇಲ್ಲಿಯೇ ನಡೆಯುತ್ತಾ ಬಂದಿವೆ. ಜಿಹಾದಿ ಸಿದ್ಧಾಂತಗಳನ್ನು ಉತ್ತೇಜಿಸುವ ಯೋಜನೆಗಳೂ ನಡೆದಿವೆ.
ಮರ್ಕಾಜ್ ಇ ತಯಬಾ ಎಂಬ ಅಧಿಕೃತ ಹೆಸರನ್ನು ಮುರಿಡ್ಕೆ ಮರ್ಕಾಜ್ ಎಂದೇ ಕರೆಯಲಾಗುತ್ತದೆ. 1988ರಲ್ಲಿ ಲಷ್ಕರ್ನ ಸಹ ಸಂಸ್ಥಾಪಕ ಸಯೀದ್ ಇದನ್ನು ಆರಂಭಿಸಿದ. ಲಾಹೋರ್ನಿಂದ 30 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರುತ್ತದೆ. ಒಟ್ಟು 200 ಎಕರೆಯಲ್ಲಿರುವ ಈ ಕೇಂದ್ರದಲ್ಲೇ ಲಷ್ಕರ್ ಎ ತಯಬಾದ ಪ್ರಮುಖ ಯೋಜನೆಗಳ ರೂಪುರೇಷೆ ನಡೆಯುತ್ತದೆ. ಲಷ್ಕರ್ನ ಈ ಎಲ್ಲಾ ಕಾರ್ಯಗಳೂ ‘ಜಮಾತ್ ಉದ್ ದವಾ’ದ ಕೇಂದ್ರ ಕಚೇರಿಯಂತೆಯೇ ನಡೆಯುತ್ತದೆ.
ಇಲ್ಲಿ ಭಯೋತ್ಪಾದಕರ ತರಬೇತಿಯ ಜತೆಗೆ, ಸಿದ್ಧಾಂತಗಳನ್ನು ಬಿತ್ತುವ ಕೇಂದ್ರವಾಗಿ ಹಾಗೂ ಶಸ್ತ್ರಾಸ್ತ್ರಗಳ ದಾಸ್ತಾನು ಕೇಂದ್ರವೂ ಆಗಿದೆ. ಇಲ್ಲಿನ ಮುಖ್ಯ ಉದ್ದೇಶವೇ ಭಾರತದಲ್ಲಿ ಅಶಾಂತಿ ಸೃಷ್ಟಿಸುವುದು. ಅದರಲ್ಲೂ ಕಾಶ್ಮೀರವೇ ಇವರ ಪ್ರಮುಖ ಗುರಿ. ಈ ಕೇಂದ್ರದಲ್ಲಿ ಮದರಸಾ, ಆಸ್ಪತ್ರೆ, ಮಾರುಕಟ್ಟೆ, ಮನೆಗಳು, ಮೀನು ಸಾಕಾಣಿಕೆ ಕೇಂದ್ರ, ಕೃಷಿ ತಾಕುಗಳು ಸೇರಿದಂತೆ ಸುಸ್ಥಿರ ಪರಿಸರದಂತೆ ಕಾಣಿಸುತ್ತದೆ.
ಇದರೊಂದಿಗೆ ಆಧುನಿಕ ಮನೆಗಳು, ಗಣಕೀಕೃತ ಧಾರ್ಮಿಕ ವಿಶ್ವವಿದ್ಯಾಲಯ, ಇದರಡಿ ಕಾರ್ಯ ನಿರ್ವಹಿಸುವ ಐದು ಸಂಸ್ಥೆಗಳು ಇವೆ. ಇಲ್ಲಿ 8ರಿಂದ 20 ವರ್ಷದ ಬಾಲಕರನ್ನು ಆಯ್ಕೆ ಮಾಡಿ ಕಠಿಣ ತರಬೇತಿಯ ಜತೆಗೆ, ತಮ್ಮ ಸಿದ್ಧಾಂತಗಳನ್ನೂ ಅವರಲ್ಲಿ ತುಂಬುವ ಕೆಲಸ ನಡೆಯುತ್ತದೆ. ಸೇನಾ ಸಮವಸ್ತ್ರದಲ್ಲೇ ಇರುವ ಶಿಬಿರಾರ್ಥಿಗಳಿಗೆ ಬಂದೂಕು ಮೂಲಕ ಗುರಿ ಇಡುವುದು ಹಾಗೂ ಈಜು ಕಡ್ಡಾಯ. ಒಂದು ಹಂತ ತಲಪುವವರೆಗೂ ಇವರು ಈ ಗಡಿಯನ್ನು ದಾಟುವಂತಿಲ್ಲ.
ಇವರೆಲ್ಲರನ್ನೂ ಜಿಹಾದಿಗಳಾಗಿ ಪರಿವರ್ತಿಸಲಾಗುತ್ತದೆ. ಹೀಗಾಗಿ ಇದನ್ನು ಭಯೋತ್ಪಾದಕರ ಕಾರ್ಖಾನೆ ಎಂದೂ ಕರೆಯಲಾಗುತ್ತದೆ. ವಾರ್ಷಿಕ ಒಂದು ಸಾವಿರ ಯುವಕರು ಇಲ್ಲಿ ತರಬೇತಿಗೊಳ್ಳುತ್ತಾರೆ.
ಭಯೋತ್ಪಾದಕರ ಸಜ್ಜುಗೊಳಿಸುವುದನ್ನೇ ಧ್ಯೆಯ ಮಾಡಿಕೊಂಡಿರುವ ಮುರಿಡ್ಕೆ ಮರ್ಕಾಜ್ಗೆ ಪಂಜಾಬ್ ಪ್ರಾಂತ್ಯದ ಸರ್ಕಾರವು ಆರ್ಥಿಕ ನೆರವು ನೀಡುತ್ತಾ ಬಂದಿದೆ. 2013–14ರಲ್ಲಿ ಪಂಜಾಬ್ ಸರ್ಕಾರವು 6.2 ಲಕ್ಷ ಅಮೆರಿಕನ್ ಡಾಲರ್ ನೆರವು ನೀಡಿದೆ. ಜಮಾತ್ ಉದ್ ದವಾ ಮೂಲಕ ಮರ್ಕಾಜ್ ಇ ತಯಬಾಗೆ ಬರುವ ಈ ಹಣದಿಂದಲೇ ಸಂಘಟನೆಯ ವಿಸ್ತರಣೆ ನಡೆಯುತ್ತಾ ಬಂದಿದೆ ಎಂದು ವರದಿಯಾಗಿದೆ.
2002ರಲ್ಲಿ ಕಾಶ್ಮೀರ ಹೆರಾಲ್ಡ್ನಲ್ಲಿ ಮುರಿಡ್ಕೆ ಧಾರ್ಮಿಕ ಕೇಂದ್ರದ ಕುರಿತ ವರದಿಯೊಂದು ಪ್ರಕಟವಾಗಿದೆ. ಛಾಯಾಚಿತ್ರ ತೆಗೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಕ್ಯಾಮೆರಾ ಮತ್ತು ಟಿವಿಗಳಿಂದ ಚಿತ್ತಚಾಂಚಲ್ಯದ ಕುರಿತು ಇಲ್ಲಿ ಬೋಧಿಸಲಾಗುತ್ತಿತ್ತು. ಸಿಗರೇಟು ಸೇರಿದಂತೆ ಅಮಲೇರಿಸುವ ಪದಾರ್ಥಗಳನ್ನು ನಿಷೇಧಿಸಲಾಗಿತ್ತು. ಲಾಹೋರ್ನಿಂದ ಜಾಗ ಪಡೆದು ಇಲ್ಲಿ ದೂರದರ್ಶನ, ಸಂಗೀತ ಮತ್ತು ಧೂಮಪಾನವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಜತೆಗೆ ಇಡೀ ಪ್ರದೇಶವನ್ನೇ ಶಸ್ತ್ರ ಸಜ್ಜಿತ ಜನರು ಸುತ್ತುವರಿದಿದ್ದರು.
‘ಕಾಶ್ಮೀರವನ್ನು ಮೊದಲುಗೊಂಡು ಭಾರತ ಮತ್ತು ಇಡೀ ಜಗತ್ತನ್ನೇ ಮುಸಲ್ಮಾನ ಪ್ರದೇಶ ಮಾಡುವುದು ಮುರಿಡ್ಕೆ ಸಂಘಟನೆಯ ಗುರಿಯಾಗಿತ್ತು. ಯಾವುದೇ ಯುವಕ ಇಲ್ಲಿ ಸೇರಿದ ತಕ್ಷಣ ಈ ಭಾಗದ ಹೆಸರನ್ನು ಬದಲಿಸಿ, ಅರಬ್ ಹೆಸರುಗಳನ್ನಿಡುತ್ತಿದ್ದರು. ಮೊದಲು ಸಾಮಾನ್ಯ, ನಂತರ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿತ್ತು.
ಕಳೆದ 11 ವರ್ಷಗಳಲ್ಲಿ ಲಷ್ಕರ್ ಎ ತಯಬಾದ 1,016 ಭಯೋತ್ಪಾದಕರು ಮೃತಪಟ್ಟಿದ್ದಾರೆ. 14 ಸಾವಿರ ಸೈನಿಕರು ಮೃತಪಟ್ಟಿದ್ದಾರೆ.
ಒಸಾಮಾ ಬಿನ್ ಲಾಡನ್ ಸಂಪರ್ಕದಲ್ಲಿದ್ದ ಈ ಸಂಘಟನೆಯ ಮುರಿಡ್ಕೆದ ಮರ್ಕಾಜ್ ಯೋಜನೆಗಾಗಿ ಮೂರು ಕೋಟಿ ಪಾಕಿಸ್ತಾನ ರೂಪಾಯಿಯನ್ನು ಖರ್ಚು ಮಾಡಲಾಗಿದೆ.
ಆಪರೇಷನ್ ಸಿಂಧೂರ್ ಮೂಲಕ ಮುರಿಡ್ಕೆಯಲ್ಲಿರುವ ಲಷ್ಕರ್ನ ಈ ಕೇಂದ್ರವನ್ನು ನಾಶಪಡಿಸಲಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.