ಪಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಉಪ ಮುಖ್ಯಮಂತ್ರಿ ಜಗದೀಶ್ ದೇವಡಾ
ಚಿತ್ರಕೃಪೆ: PTI, X
ಜಬಲ್ಪುರ: ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಕ್ಕಾಗಿ ಇಡೀ ದೇಶ, ಸೇನೆ ಹಾಗೂ ಯೋಧರು ಪ್ರಧಾನಿ ನರೇಂದ್ರ ಮೋದಿ ಅವರು ಪಾದಗಳಿಗೆ ನಮಸ್ಕರಿಸಿದ್ದಾರೆ ಎಂದು ಮಧ್ಯಪ್ರದೇಶ ಉಪ ಮುಖ್ಯಮಂತ್ರಿ ಜಗದೀಶ್ ದೇವಡಾ ಶುಕ್ರವಾರ ಹೇಳಿದ್ದಾರೆ.
ನಾಗರಿಕ ರಕ್ಷಣಾ ಸ್ವಯಂಸೇವಕರ ಸಮಾರಂಭದಲ್ಲಿ ದೇವಡಾ ಈ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದ ಹಣಕಾಸು ಸಚಿವರೂ ಆಗಿರುವ ದೇವಡಾ, 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅವರ ಪಾದಕ್ಕೆ ಇಡೀ ದೇಶ, ಅದರ ಸೇನೆ ಹಾಗೂ ಯೋಧರು ಶಿರಭಾಗಿ ನಮಸ್ಕರಿಸಿದ್ದಾರೆ. ಇಡೀ ದೇಶವೇ ಅವರ ಪಾದಗಳಿಗೆ ನಮಿಸಿದೆ' ಎಂದು ಹೇಳಿದ್ದಾರೆ.
'ಆಪರೇಷನ್ ಸಿಂಧೂರ' ಮೂಲಕ ಪಾಕಿಸ್ತಾನಕ್ಕೆ ನೀಡಿರುವ ಪ್ರತಿಕ್ರಿಯೆಯನ್ನು ಶ್ಲಾಘಿಸಲು ಪದಗಳೇ ಸಾಲವು ಎಂದಿರುವ ದೇವಡಾ, 'ಮೋದಿ ಅವರಿಗೆ ದೊಡ್ಡ ಚಪ್ಪಾಳೆ ನೀಡೋಣ' ಎಂದಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಜನರು ಭಾರಿ ಆಕ್ರೋಶಗೊಂಡಿದ್ದರು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದನಾ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ನಡೆಯುವವರೆಗೆ ದೇಶದ ಪ್ರತಿಯೊಬ್ಬರೂ ಸಂಕಟ ಅನುಭವಿಸಿದ್ದರು ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು.
ಎರಡು ವಾರದ ನಂತರ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.