ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ತೊಗಲು ಗೊಂಬೆಯಾಟ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ
(ಚಿತ್ರ ಕೃಪೆ–@rashtrapatibhvn)
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದ 71 ಮಂದಿ ಗಣ್ಯರಿಗೆ 2025ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.
ಈ ಪೈಕಿ ನಾಲ್ವರಿಗೆ ಪದ್ಮವಿಭೂಷಣ, 10 ಮಂದಿಗೆ ಪದ್ಮಭೂಷಣ ಹಾಗೂ 57 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
2025ರ ಜನವರಿ 25ರಂದು ಅಂದರೆ 76ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ದೇಶದ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳಿಗೆ ಒಟ್ಟಾರೆಯಾಗಿ 139 ಗಣ್ಯ ವ್ಯಕ್ತಿಗಳನ್ನು ಹೆಸರಿಸಲಾಗಿತ್ತು.
ಆ ಪೈಕಿ 71 ಜನರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು.
ಒಸಾಮು ಸುಜುಕಿ (ಮರಣೋತ್ತರ)- ಸುಜುಕಿ ಮೋಟಾರ್ ಕಾರ್ಪೊರೇಷನ್ನ ಮಾಜಿ ಮುಖ್ಯಸ್ಥ.
ಲಕ್ಷ್ಮಿನಾರಾಯಣ ಸುಬ್ರಮಣಿಯಂ- ಖ್ಯಾತ ಪಿಟೀಲು ವಾದಕ.
ಡಿ. ನಾಗೇಶ್ವರ ರೆಡ್ಡಿ- ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಅಧ್ಯಕ್ಷ.
ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ) ಮಲಯಾಳಂ ಲೇಖಕ ಮತ್ತು ಚಲನಚಿತ್ರ ನಿರ್ಮಾಪಕ.
ತೆಲುಗು ನಟ ನಂದಮೂರಿ ಬಾಲಕೃಷ್ಣ– ಕಲೆ
ವಿನೋದ್ ಧಾಮ್ –ವಿಜ್ಞಾನ ಮತ್ತು ಎಂಜಿನಿಯರಿಂಗ್
ಸುಶೀಲ್ ಕುಮಾರ್ ಮೋದಿ (ಮರಣೋತ್ತರ) –ಸಾರ್ವಜನಿಕ ಸೇವೆ
ಹಿರಿಯ ನಟ ಶೇಖರ್ ಕಪೂರ್– ಕಲೆ
ತಮಿಳು ನಟ ಎಸ್. ಅಜಿತ್ ಕುಮಾರ್– ಕಲೆ
ಪಂಕಜ್ ಪಟೇಲ್– ವ್ಯಾಪಾರ ಮತ್ತು ಕೈಗಾರಿಕೆ
ಡಾ. ಜೋಸ್ ಚಾಕೊ ಪೆರಿಯಪ್ಪುರಂ –ವೈದ್ಯಕೀಯ ಕ್ಷೇತ್ರ
ಅನಂತರಾಮಯ್ಯ ಸೂರ್ಯ ಪ್ರಕಾಶ್ –ಪತ್ರಿಕೋದ್ಯಮ
ಹಾಕಿ ದಿಗ್ಗಜ ಪಿ.ಆರ್ ಶ್ರೀಜೇಶ್– ಕ್ರೀಡಾ ಕ್ಷೇತ್ರ
ಗಾಯಕ ಪಂಕಜ್ ಉದಾಸ್ (ಮರಣೋತ್ತರ)– ಕಲೆ
57 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರಲ್ಲಿ ಕರ್ನಾಟಕದ ಕೊಪ್ಪಳದ ತೊಗಲು ಗೊಂಬೆಯಾಟ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಡಾ. ವಿಜಯಲಕ್ಷ್ಮಿ ದೇಶಮಾನೆ, ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಎಸ್ಬಿಐ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಅಮೆರಿಕದ ಲೇಖಕ ಸ್ಟೀಫನ್ ನ್ಯಾಪ್, ರೋನು ಮಜುಂದಾರ್ ಮತ್ತು ಶಾಸ್ತ್ರೀಯ ಗಾಯಕರಾದ ಡಾ.ಕೆ.ಓಮನ್ಕುಟ್ಟಿ ಅಮ್ಮ, ಖ್ಯಾತ ವೇದ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್, ಯೋಗ ಶಿಕ್ಷಣದ ಪ್ರವರ್ತಕಿ ಹೆಚ್.ಇ. ಶೈಖಾ ಅಲಿ ಜಾಬರ್ ಅಲ್-ಸಬಾ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.