ಗುವಾಹಟಿ: ಪಹಲ್ಗಾಮ್ನಂತಹ ಭಯೋತ್ಪಾದನಾ ಕೃತ್ಯದ ಹಿಂದಿರುವ ಪಾಕಿಸ್ತಾನಕ್ಕೆ, ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಾಲ ನೀಡುತ್ತಿರುವುದು ಅಚ್ಚರಿಯ ಹಾಗೂ ಬೇಸರದ ಸಂಗತಿಯಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್ನ ಉಪನಾಯಕರಾಗಿರುವ ಗೌರವ್ ಗೊಗೊಯ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ಐಎಂಎಫ್ ನೀಡುವ ₹8,542 ಕೋಟಿ (1 ಬಿಲಿಯನ್ ಅಮೆರಿಕನ್ ಡಾಲರ್) ಸಾಲವು, ಅಲ್ಲಿನ ಅಭಿವೃದ್ಧಿಗೆ ಬಳಕೆಯಾಗುವುದಿಲ್ಲ. ಬದಲಾಗಿ, ಅವರ ಸೇನೆಯನ್ನು ಬಲಪಡಿಸಲು, ಪಾಕ್ ಈ ಹಣವನ್ನು ಉಪಯೋಗಿಸುತ್ತದೆ. ಇದರಿಂದ ಮತ್ತಷ್ಟು ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತದೆ ಎಂದು ಗೊಗೊಯ್ ಕಿಡಿಕಾರಿದ್ದಾರೆ.
ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ, ಜರ್ಮನಿ, ಪ್ರಾನ್ಸ್, ಯು.ಕೆ, ಇಟಲಿ, ಇಸ್ರೇಲ್ ಸೇರಿದಂತೆ 25 ರಾಷ್ಟ್ರಗಳ ಪ್ರತಿನಿಧಿಗಳಿದ್ದ ಐಎಂಎಫ್ ಸಭೆಯು
ಶುಕ್ರವಾರವಷ್ಟೇ ನೆರವಿನ ಮೊತ್ತವಾಗಿ ಪಾಕಿಸ್ತಾನಕ್ಕೆ ₹8,542 ಕೋಟಿ ನೆರವು ನೀಡಲು ಮುಂದಾಗಿದೆ.
ಪಾಕಿಸ್ತಾನಕ್ಕೆ ಐಎಂಎಫ್ ಸಾಲ ನೀಡುವ ಕುರಿತ ಸಭೆಯಲ್ಲಿ ಭಾರತವು ಅದನ್ನು ತೀವ್ರವಾಗಿ ವಿರೋಧಿಸಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಸಭೆಯಲ್ಲಿ ಭಾರತವು ತಟಸ್ಥ ನಿಲುವು ತೆಗೆದುಕೊಂಡಿದ್ದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಐಎಂಎಫ್ ಸಭೆಯಲ್ಲಿ ಭಾರತವು ಮತ ಚಲಾವಣೆಯಿಂದ ಹಿಂದೆ ಸರಿದಿತ್ತು. ಸಭೆಯಲ್ಲಿ, ಐಎಂಎಫ್ ಹಣವನ್ನು ಪಾಕಿಸ್ತಾನವು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅದನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಭಾರತವು ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.