ADVERTISEMENT

ಪಾಕಿಸ್ತಾನದೊಂದಿಗೆ ಬಿಜೆಪಿ ಸಂಬಂಧ: ಸಾಲು ಸಾಲು ಪ್ರಶ್ನೆ ಕೇಳಿದ ಕಾಂಗ್ರೆಸ್

ಪಿಟಿಐ
Published 21 ಮೇ 2025, 10:26 IST
Last Updated 21 ಮೇ 2025, 10:26 IST
<div class="paragraphs"><p>ಎಸ್. ಜೈಶಂಕರ್ ಮತ್ತು ರಾಹುಲ್ ಗಾಂಧಿ</p></div>

ಎಸ್. ಜೈಶಂಕರ್ ಮತ್ತು ರಾಹುಲ್ ಗಾಂಧಿ

   

ನವದೆಹಲಿ: ‘2008ರ ನವೆಂಬರ್‌ 26ರಂದು ಮುಂಬೈ ದಾಳಿಯ ನಂತರ ಒಬ್ಬನನ್ನು ಬಂಧಿಸಿ ಉಳಿದ ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಆ ಸಂದರ್ಭದಲ್ಲಿ ಇಡೀ ಜಗತ್ತೇ ಭಾರತದ ಕ್ರಮವನ್ನು ಬೆಂಬಲಿಸಿತು. ಆದರೆ ಪಹಲ್ಗಾಮ್‌ ದಾಳಿಯ ನಂತರ, ಬೆಂಬಲ ಕೋರಿ ಕೇಂದ್ರ ಸರ್ಕಾರವು ವಿದೇಶಗಳಿಗೆ ನಿಯೋಗ ಕಳುಹಿಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ಭಯೋತ್ಪಾದಕರು ಇನ್ನೂ ದೊಡ್ಡ ಸಂಖ್ಯೆಯಲ್ಲೇ ಉಳಿದಿದ್ದಾರೆ’ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಆರೋಪಿಸಿದೆ.

ಕೇಂದ್ರವನ್ನು ಟೀಕಿಸಲು ಬಳಸುವ ಶಕ್ತಿಯನ್ನು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಹೇಳಿಕೆ ನೀಡಲು ಬಳಸಿ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಬಿಜೆಪಿ ಟೀಕೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿರುಗೇಟು ನೀಡಿದ್ದಾರೆ.

ADVERTISEMENT

‘ಮೊಹಮ್ಮದ್‌ ಅಲಿ ಜಿನ್ನಾಗೆ ಕ್ಲೀನ್ ಚಿಟ್‌ ನೀಡಿದವರು ಹಾಗೂ ಹೊಗಳಿದವರು ಯಾರು? ಜಿನ್ನಾರನ್ನು ‘ಮಹಾನ್‌ ನಾಯಕ’ ಎಂದು ಜಸ್ವಂತ್ ಸಿಂಗ್ ಮತ್ತು ಎಲ್‌.ಕೆ. ಅಡ್ವಾನಿ ಅವರು ಬಣ್ಣಿಸಿದ್ದೇಕೆ? ಅಟಲ್‌ ಬಿಹಾರಿ ವಾಜಪೇಯಿ ಅವರು ಲಾಹೋರ್ ಯಾತ್ರಾ ನಡೆಸಿದ್ದೇಕೆ? ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ಭೇಟಿ ನೀಡಿ ಅಂದಿನ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಿದ್ದೇಕೆ? ಎಂಬ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನಿಶಾನ್ ಎ ಪಾಕಿಸ್ತಾನ್‌’ ಪ್ರದಾನ ಮಾಡಲಾಗಿದೆ. ಮೊರಾರ್ಜಿ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅವರೇ ಅಲ್ಲವೇ? ಏ. 22ರ ಪಹಲ್ಗಾಮ್ ದಾಳಿ ನಡೆದು ತಿಂಗಳು ಕಳೆದರೂ ದಾಳಿಕೋರರ ಬಂಧನವಾಗಿಲ್ಲವೇಕೆ?’ ಎಂದು ಜೈರಾಮ್ ಕೇಳಿದ್ದಾರೆ.

ನಾಶವಾಗದೇ ಉಳಿದಿರುವ ಭಯೋತ್ಪಾದಕರು: ಕಾಂಗ್ರೆಸ್

‘2008ರ ನ. 26ರಲ್ಲಿ (26/11) ಮುಂಬೈನಲ್ಲಿ ಹೋಟೆಲ್‌ ಒಂದರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರನ್ನು ಕೊಲ್ಲಲಾಯಿತು. ಒಬ್ಬನನ್ನು ಬಂಧಿಸಲಾಯಿತು. ಆಗ ಭಯೋತ್ಪಾದನೆ ವಿರುದ್ಧದ ಭಾರತದ ಪ್ರತಿಕ್ರಿಯೆಗೆ ಇಡೀ ಜಗತ್ತಿನ ಬೆಂಬಲ ದೊರೆಯಿತು. ಆದರೆ ದೇಶದ ಇಂದಿನ ಪರಿಸ್ಥಿತಿ ನೋಡಿ, ಭಯೋತ್ಪಾದಕರು ನಾಶವಾಗದೇ ಈಗಲೂ ದೊಡ್ಡ ಸಂಖ್ಯೆಯಲ್ಲಿ ಉಳಿದಿದ್ದಾರೆ. ಆದರೆ, ವಿದೇಶಗಳ ಬೆಂಬಲ ಕೋರಿ ನಿಯೋಗ ಕಳುಹಿಸಲು ಭಾರತ ಸಿದ್ಧತೆ ನಡೆಸಿದೆ’ ಎಂದು ಆರೋಪಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ಏ. 22ರಂದು ದಾಳಿ ನಡೆಸಿ 26 ಅಮಾಯಕರನ್ನು ಅವರ ಕುಟುಂಬ ಸದಸ್ಯರ ಎದುರೇ ಕೊಂದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮೇ 7ರಂದು ನಡೆಸಿದ ‘ಆಪರೇಷನ್ ಸಿಂಧೂರ’ದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಘರ್ಷ ಹಾಗೂ ಸೇನಾ ಸಂಘರ್ಷಗಳೂ ನಡೆದವು. ಮೇ 10ರಂದು ಕದನ ವಿರಾಮ ಘೋಷಣೆಯಾಯಿತು.

ಮೀರ್ ಜಾಫರ್‌ – ಜೈಚಂದ್‌’: ಆರೋಪ, ಪ್ರತ್ಯಾರೋಪ

ಇಡೀ ಘಟನೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ ಸಮರಕ್ಕೆ ಕಾರಣವಾಗಿದೆ. ವಿದೇಶಗಳಿಗೆ ಸಂಸದರ ನಿಯೋಗ ಕಳುಹಿಸಲು ಹಾಗೂ ತಮ್ಮ ಪಕ್ಷದ ಸಂಸದರ ಹೆಸರುಗಳನ್ನು ಶಿಫಾರಸು ಮಾಡಲು ವಿದೇಶಾಂಗ ವ್ಯವಹಾರಗಳ ಇಲಾಖೆಯು ಕಾಂಗ್ರೆಸ್‌ಗೆ ತಿಳಿಸಿತ್ತು. ಅದರಂತೆಯೇ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್‌ ಮತ್ತು ರಾಜ್‌ ಬ್ರಾರ್‌ ಅವರ ಹೆಸರುಗಳನ್ನು ಕಾಂಗ್ರೆಸ್ ಕಳುಹಿಸಿತ್ತು. ಈ ಹೆಸರುಗಳನ್ನು ಕೈಬಿಟ್ಟು, ಶಶಿ ತರೂರ್ ಅವರನ್ನು ಕೇಂದ್ರ ಆಯ್ಕೆ ಮಾಡಿದ್ದು ಕಾಂಗ್ರೆಸ್‌ನ ಕಣ್ಣು ಕೆಂಪಗಾಗಿಸಿತ್ತು.

‘ಗೊಗೊಯಿ ಅವರ ಪತ್ನಿ ಎಲಿಜಬೆತ್‌ ಕೊಲ್ಬರ್ನ್‌ ಅವರು ಪಾಕಿಸ್ತಾನದ ಸೇನೆಯೊಂದಿಗೆ ಉತ್ತಮ ನಂಟು ಹೊಂದಿದ್ದಾರೆ ಹಾಗೂ ಡಾ. ಸಯದ್ ನಾಸೀರ್ ಹುಸೇನ್‌ ಬೆಂಬಲಿಗರು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದರು. ಭಯೋತ್ಪಾದನೆಗೆ ಪಾಕಿಸ್ತಾನದ ಕುಮ್ಮಕ್ಕು ಕುರಿತು ವಿಶ್ವಕ್ಕೆ ಮನವರಿಕೆ ಮಾಡಿಕೊಡಲು ಇಂಥವರನ್ನು ಕಳುಹಿಸಬೇಕೇ’ ಎಂದು ಬಿಜೆಪಿ ಪ್ರಶ್ನಿಸಿತ್ತು.

ಇದಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ‘ಆಧುನಿಕ ಯುಗದ ಮೀರ್ ಜಾಫರ್‌’ ಎಂದು ಬಿಜೆಪಿ ಜರಿಯಿತು. ಇದಕ್ಕೆ ಪ್ರತಿಯಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ‘ನವಯುಗದ ಜೈಚಂದ್‌’ (ಪೃಥ್ವಿರಾಜ್ ಚವ್ಹಾಣ್‌ ವಿರುದ್ಧದ ಯುದ್ಧದಲ್ಲಿ ಮೊಹಮ್ಮದ್ ಘೋರಿಗೆ ನೆರವಾಗಿ ವಂಚಿಸಿದ್ದ) ಎಂದು ಆರೋಪಿಸಿತ್ತು.

‘ಆಪರೇಷನ್ ಸಿಂಧೂರ ಕುರಿತು ವಿದೇಶಾಂಗ ಸಚಿವರು ನೀಡಿದ ಎಚ್ಚರಿಕೆ ನಂತರದಲ್ಲಿ ಎಷ್ಟು ಜನ ಭಯೋತ್ಪಾದಕರು ಪಲಾಯನ ಮಾಡಿದ್ದಾರೆ ಮತ್ತು ಭಾರತ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ?’ ಎಂದು ಜೈಶಂಕರ್ ಅವರನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಇದು ಬಿಜೆಪಿಯನ್ನು ಕೆರಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.