ADVERTISEMENT

‘ರೈತರ ಪ್ರತಿಭಟನೆ ಮೇಲಿನ ಚರ್ಚೆಯಿಂದ ತಪ್ಪಿಸಿಕೊಳ್ಳಲು ಸಂಸತ್‌ ಅಧಿವೇಶನ ರದ್ದು‘

ಶಿವಸೇನಾ ಸಂಸದ ಸಂಜಯ್ ರಾವುತ್‌ ಟೀಕೆ

ಪಿಟಿಐ
Published 20 ಡಿಸೆಂಬರ್ 2020, 8:16 IST
Last Updated 20 ಡಿಸೆಂಬರ್ 2020, 8:16 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಮುಂಬೈ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕೈಗೊಂಡಿರುವ ಪ್ರತಿಭಟನೆ ಮೇಲಿನ ಚರ್ಚೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಂಸತ್‌ನ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಲಾಗಿದೆ ಎಂದು ಶಿವಸೇನಾ ಮುಖಂಡ, ರಾಜ್ಯಸಭೆ ಸದಸ್ಯ ಸಂಜಯ್ ರಾವುತ್‌ ಟೀಕಿಸಿದ್ದಾರೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ವಾರದ ಅಂಕಣ ‘ರೋಖ್‌ಠೋಕ್‌’ದಲ್ಲಿ ಈ ಕುರಿತು ಬರೆದಿರುವ ಅವರು, ‘ಚರ್ಚೆ, ಸಂಸತ್‌ ಅಧಿವೇಶನವನ್ನು ನಡೆಸುವ ಬಗ್ಗೆ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಇಷ್ಟ ಇಲ್ಲವೆಂದಾದ ಮೇಲೆ ₹ 1,000 ಕೋಟಿ ವೆಚ್ಚ ಮಾಡಿ ಸೆಂಟ್ರಲ್‌ ವಿಸ್ತಾ ನಿರ್ಮಾಣ ಮಾಡುವುದಾದರೂ ಏಕೆ?’ ಎಂದು ಪ್ರಶ್ನಿಸಿದ್ದಾರೆ.

‘ಈಗಿರುವ ಸಂಸತ್‌ ಭವನ ಸದೃಢವಾಗಿಯೇ ಇದೆ. ಇನ್ನೂ 50–75 ವರ್ಷಗಳ ಕಾಲ ಈಗಿರುವ ಕಟ್ಟಡದಲ್ಲಿಯೇ ಸಂಸತ್‌ನ ಕಾರ್ಯಕಲಾಪಗಳನ್ನು ನಡೆಸಬಹುದು’ ಎನ್ನುವ ಮೂಲಕ ಅವರು ನೂತನ ಸಂಸತ್‌ ಭವನ ನಿರ್ಮಿಸುವ ಕೇಂದ್ರದ ನಿರ್ಧಾರವನ್ನು ಟೀಕಿಸಿದ್ದಾರೆ.

ADVERTISEMENT

‘ನಮ್ಮ ಹಿರಿಯರು ಪ್ರಾರಂಭಿಸಿದ ಪರಂಪರೆಯನ್ನು ನಾಶಮಾಡಿ, ಅವರ ಕೊಡುಗೆಗಳನ್ನು ಮರೆಮಾಚುವುದು, ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳುವ ಸಲುವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದನ್ನು ಅತಿಯಾದ ಪ್ರಜಾತಂತ್ರ ಎಂದು ಯಾರೂ ಯೋಚಿಸುವುದಿಲ್ಲ’ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.