ಉನ್ನಾವ್ / ಫರೂಖಾಬಾದ್ (ಉತ್ತರ ಪ್ರದೇಶ): ‘ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳಿಂದ ಬಡವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆ ಪಕ್ಷಗಳಿಗೆ ಮತ ಹಾಕಿ ಹಾಳುಮಾಡಿಕೊಳ್ಳಬೇಡಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಫರೂಖಾಬಾದ್ನಲ್ಲಿ ಈ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕರ್ಫ್ಯೂ ವಿಧಿಸಿದ, ಅಭಿವೃದ್ಧಿಗೆ ತಡೆಯಾದ, ತುಷ್ಟೀಕರಣದ ರಾಜಕೀಯ ಮಾಡಿದವರ ಬಗ್ಗೆ ಎಚ್ಚರದಿಂದಿರಿ” ಎಂದು ಮತದಾರರಿಗೆ ಹೇಳಿದರು.
ಉನ್ನಾವ್ನಲ್ಲಿ ₹241 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್ನವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಿತ್ತಾ? ಸಮಾಜವಾದಿ ಪಕ್ಷದಲ್ಲಿ ಇದ್ದವರಿಗೆ ಆಗುತ್ತಿತ್ತೇ? ಅವರಿಗೆ ಬಡವರಿಗೆ ಪಡಿತರ, ಮನೆ ಅಥವಾ ಆರೋಗ್ಯ ಸೌಲಭ್ಯಗಳನ್ನು ನೀಡಲು ಸಾಧ್ಯವಾಗದಿದ್ದರೆ, ರಾಮ ಮಂದಿರ ನಿರ್ಮಿಸುವ ಮೂಲಕ ನಿಮ್ಮ ನಂಬಿಕೆಯನ್ನು ಗೌರವಿಸಲು ಸಾಧ್ಯವಾಗದಿದ್ದರೆ, ನೀವು ನಿಮ್ಮ ಮತವನ್ನು ಏಕೆ ವ್ಯರ್ಥ ಮಾಡುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.
‘ಯಾರು ಕೆಲಸ ಮಾಡುತ್ತಾರೋ, ತಾರತಮ್ಯವಿಲ್ಲದೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒದಗಿಸುತ್ತಾರೋ, ಉತ್ತಮ ಭದ್ರತಾ ಮೂಲಸೌಕರ್ಯವನ್ನು ಒದಗಿಸುತ್ತಾರೋ, ಅವರಿಗೆ ಅಧಿಕಾರಕ್ಕೆ ಬರುವ ಹಕ್ಕಿದೆ’ ಎಂದು ಆದಿತ್ಯನಾಥ್ ಹೇಳಿದರು.
ಇಡೀ ದೇಶದಲ್ಲಿ ‘ಇನ್ನೊಂದು ಬಾರಿ ಮೋದಿ ಸರ್ಕಾರ’ ಎನ್ನುವ ಘೋಷಣೆ ಅನುರಣಿಸುತ್ತಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.