ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ‘ಆಮ್ ಆದ್ಮಿ ಪಕ್ಷವು ದೆಹಲಿಗೆ ಅನಾಹುತವಿದ್ದಂತೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಈ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಎಎಪಿ ಆಡಳಿತವು ಇನ್ನೂ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ’ ಎಂದಿದ್ದಾರೆ.
‘ಒಂದೆಡೆ ಎಲ್ಲವನ್ನೂ ಉತ್ತಮಗೊಳಿಸಲು ಕೇಂದ್ರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ ಕೇಂದ್ರಾಡಳಿತ ಪ್ರದೇಶವು, ಲಜ್ಜೆಗೆಟ್ಟು ಸುಳ್ಳುಗಳನ್ನು ಹರಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಎಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಲಾ ಶಿಕ್ಷಣ, ಮಾಲಿನ್ಯ ಹಾಗೂ ಮದ್ಯ ಮಾರಾಟ ಕುರಿತು ಸಾಕಷ್ಟು ಅವ್ಯವಹಾರ ನಡೆಸಿದೆ’ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಈ ‘ಅನಾಹುತ’ದ ವಿರುದ್ಧ ಕದನ ಆರಂಭವಾಗಿದೆ. ಈ ಪಕ್ಷವನ್ನು ಕಿತ್ತೊಗೆಯುವುದೊಂದೇ ನಮ್ಮ ಧ್ಯೇಯ. ಈ ‘ಅನಾಹುತ’ವನ್ನು ಕಿತ್ತೊಗೆದು, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ’ ಎಂದಿದ್ದಾರೆ.
'ರಾಷ್ಟ್ರ ನಿರ್ಮಾಣ ಹಾಗೂ ಜನರ ಕಲ್ಯಾಣ ಕುರಿತು ಹೊಸ ಬಗೆಯ ರಾಜಕೀಯಕ್ಕೆ ಈ ವರ್ಷ ಸಾಕ್ಷಿಯಾಗಲಿದೆ. ಹೀಗಾಗಿ ಈ ‘ಅನಾಹುತ’ವನ್ನು ಕಿತ್ತೊಗೆಯಬೇಕಿದೆ. ಆಯುಷ್ಮಾನ್ ಭಾರತ್ನಂತ ಕೇಂದ್ರ ಸರ್ಕಾರದ ಆರೋಗ್ಯ ವಿಮಾ ಯೋಜನೆ ಹಾಗೂ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಈ ನಗರ ಸರ್ಕಾರ ಅವಕಾಶ ನೀಡದ ಕಾರಣ ಹಿನ್ನಡೆಯಾಗಿದೆ. ನಮ್ಮ ಸರ್ವ ಪ್ರಯತ್ನಗಳ ನಂತರವೂ ಜನರು ಇಲ್ಲಿ ಪರಿಪೂರ್ಣ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
‘ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಬಡವರಿಗೆ ನಿರ್ಮಾಣಗೊಂಡ ಮನೆಗಳು ಹಾಗೂ ಹೆದ್ದಾರಿಗಳ ನಿರ್ಮಾಣದಲ್ಲಿ ‘ಅನಾಹುತ’ ಸರ್ಕಾರದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಇವು ಕಾರ್ಯರೂಪಕ್ಕೆ ಬಂದಿವೆ. ದೇಶದ ಜನರಿಗೆ ಮನೆ ಕಟ್ಟಿಕೊಡುವುದು ತನ್ನ ಕನಸು ಎಂದಿದ್ದ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಅವರು ತಮಗಾಗಿ ಶೀಶ ಮಹಲ್ ನಿರ್ಮಿಸಿಕೊಳ್ಳಬಹುದಿತ್ತು. ಈ ಪಕ್ಷದ ಜನರು ಭ್ರಷ್ಟಾಚಾರ ನಡೆಸುತ್ತಾರೆ. ನಂತರ ಅದನ್ನು ವೈಭವೀಕರಿಸುತ್ತಾರೆ’ ಎಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಬಂಗಲೆಯ ನವೀಕರಣಕ್ಕೆ ಭಾರೀ ಹಣವನ್ನು ಖರ್ಚು ಮಾಡಿದ್ದನ್ನು ಬಿಜೆಪಿ ಖಂಡಿಸಿತ್ತು. ದುರಸ್ತಿಗೊಂಡ ಅವರ ಮನೆಯನ್ನು ‘ಶೀಶ ಮಹಲ್’ ಎಂದು ಕರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.