ವಾರಣಾಸಿ: ಸ್ವಕ್ಷೇತ್ರ ವಾರಣಾಸಿಗೆ ಒಂದು ದಿನದ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪುತ್ರಿಯ ಮದುವೆಗೆ ಆಹ್ವಾನ ನೀಡಿದ್ದ ರಿಕ್ಷಾ ಎಳೆಯುವ ಮಂಗಲ್ಕೇವತ್ನನ್ನು ಭೇಟಿ ಮಾಡಿದ್ದಾರೆ.
ಭೇಟಿ ವೇಳೆ ಮಂಗಲ್ಕೇವತ್ ಮತ್ತು ಕುಟುಂಬದವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ವಿಚಾರಿಸಿದ್ದು, ಸ್ವಚ್ಛ ಭಾರತ್ ಅಭಿಯಾನಕ್ಕೆ ಆತನ ಕುಟುಂಬ ನೀಡಿರುವ ಕೊಡುಗೆ ಕುರಿತು ಕೊಂಡಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆ ಪಡೆದಿದ್ದ ಮಂಗಲ್ ಕೇವತ್, ತನ್ನ ಗ್ರಾಮದಲ್ಲಿರುವ ಗಂಗಾ ನದಿ ದಡವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು.
ಮಗಳ ಮದುವೆಗೆ ಶುಭಾಶಯ ಕೋರಿ ಪ್ರಧಾನ ಮಂತ್ರಿ ಕಚೇರಿಯಿಂದ ಶುಭಾಶಯ ಪತ್ರ ಬಂದ ಬಳಿಕ ಕುಟುಂಬ ಸಂತೋಷಗೊಂಡಿತ್ತು.
'ಫೆಬ್ರುವರಿ 8ರಂದು ನಾನೇ ಅದನ್ನು ವೈಯಕ್ತಿಕವಾಗಿ ದೆಹಲಿಯ ಪ್ರಧಾನಮಂತ್ರಿ ಕಚೇರಿಗೆ ನೀಡಿದ್ದೆ. ಪ್ರಧಾನ ಮಂತ್ರಿ ಮೋದಿ ನಮ್ಮ ದೇವರು ಮತ್ತು ಗುರು, ಹಾಗಾಗಿ ನನ್ನ ಪುತ್ರಿಯ ಮೊದಲ ಕರೆಯೋಲೆಯನ್ನು ಅವರಿಗೆ ಕಳುಹಿಸಿದ್ದೆ. ಇದೀಗ ಪ್ರಧಾನಿ ಅವರು ಬರೆದ ಪತ್ರ ನಮ್ಮನ್ನು ತಲುಪಿದೆ ಮತ್ತು ಇದು ನಮಗೆ ಸಂತಸ ತಂದಿದೆ' ಎಂದು ಕೇವತ್ ತಿಳಿಸಿದ್ದರು.
ಸದ್ಯದಲ್ಲೇ ಉತ್ತರ ಪ್ರದೇಶಕ್ಕೆ ಆಗಮಿಸಲಿರುವ ಪ್ರಧಾನಿ ಅವರನ್ನು ಭೇಟಿ ಮಾಡಲು ನಾವು ಉತ್ಸುಕರಾಗಿದ್ದೇವೆ. ಅವರನ್ನು ಭೇಟಿಯಾದ ಬಳಿಕ ನಮ್ಮ ಕುಟುಂಬ ಎದುರಿಸುತ್ತಿರುವ ಸಂಕಷ್ಟಗಳನ್ನು ಅವರ ಬಳಿ ಹೇಳಿಕೊಳ್ಳಬೇಕು ಎಂದು ಕೇವತ್ ಪತ್ನಿ ರೇಣು ದೇವಿ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.