
ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಕೃತಕ ಬುದ್ಧಿಮತ್ತೆಗಾಗಿ ‘ಮಾನವ್ ವಿಷನ್’ ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅದಕ್ಕಾಗಿ ಐದು ಪ್ರಮುಖ ತತ್ವಗಳನ್ನು ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ವಿವರಿಸಿದ್ದಾರೆ.
ದೆಹಲಿಯ ಭಾರತ ಮಂಟಪದಲ್ಲಿ ಆಯೋಜನೆಗೊಂಡಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು
‘ಮಾನವ್’ ಪದದ ಬಗ್ಗೆ ವಿವರಿಸಿರುವ ಅವರು, ‘ಹಿಂದಿಯಲ್ಲಿ ಮಾನವ್ ಎಂದರೆ ಮನುಷ್ಯ ಎಂದರ್ಥ. ಈ ಪದ ಐದು ಪ್ರಮುಖ ಐದು ತತ್ವಗಳನ್ನು ಪ್ರತಿನಿಧಿಸುವ ಸಂಕ್ಷಿಪ್ತ ರೂಪವಾಗಿ ಕಾರ್ಯನಿರ್ವಹಿಸುತ್ತದೆ. ನೈತಿಕತೆ ಅಥವಾ ನೈತಿಕತೆಯ ವ್ಯವಸ್ಥೆ, ಜವಾಬ್ದಾರಿಯುತ ಆಡಳಿತ, ರಾಷ್ಟ್ರೀಯ ಸಾರ್ವಭೌಮತ್ವ, ವಿಶೇಷವಾಗಿ ದತ್ತಾಂಶದ ಹಕ್ಕು, ಸುಲಭವಾಗಿ ದೊರೆಯುವ ಮತ್ತು ಅಂತರ್ಗತ ತಂತ್ರಜ್ಞಾನ, ಮಾನ್ಯ ಮತ್ತು ಕಾನೂನುಬದ್ಧ ವ್ಯವಸ್ಥೆಗಳನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.
ವೈರ್ಲೆಸ್ ಸಂಹವನದ ಆವಿಷ್ಕಾರಕ್ಕೆ ಹೋಲಿಸಿದರೆ ಎಐ ಐತಿಹಾಸಿಕ ರೂಪಾಂತರವಾಗಿದೆ. ಮೊದಲ ಬಾರಿಗೆ ವೈರ್ಲೆಸ್ ಮೂಲಕ ಒಂದು ಕಡೆಯಿಂದ ಕಳುಹಿಸಿದ ವಿಷಯ ಕ್ಷಣಮಾತ್ರದಲ್ಲಿ ಮತ್ತೊಂದು ಪ್ರದೇಶಕ್ಕೆ ತಲುಪಲು ಸಾಧ್ಯ ಎಂಬುದನ್ನು ಊಹಿಸಿರಲಿಲ್ಲ.. ಈಗ ನಾವು ಊಹಿಸುತ್ತಿರುವುದು ಎಐ ಪ್ರಭಾವದ ಆರಂಭ ಮಾತ್ರ’ ಎಂದು ವಿವರಿಸಿದರು.
ಕೃತಕ ಬುದ್ಧಿಮತ್ತೆಯು ಯಂತ್ರಗಳಿಗೆ ಬುದ್ಧಿಯ ಬಲ ತುಂಬುತ್ತಿದೆ. ಆದರೆ ಅದಕ್ಕಿಂತ ಹೆಚ್ಚಾಗಿ, ಅದು ಮಾನವನ ಸಾಮರ್ಥ್ಯಗಳನ್ನು ಹಲವು ಪಟ್ಟು ಹೆಚ್ಚಿಸುತ್ತಿದೆ. ಅದರಲ್ಲಿ ಒಂದೇ ಒಂದು ವ್ಯತ್ಯಾಸವೆಂದರೆ ಎಐನ ವೇಗ ಈ ಬಾರಿ ಹೆಚ್ಚಾಗಿದೆ. ಒಂದು ಕಾಲದಲ್ಲಿ ಯಂತ್ರಗಳಿಂದ ಕಲಿಕೆ ಎನ್ನುವುದು ಸಾಮಾನ್ಯವಾಗಿತ್ತು. ಆದರೆ ಯಂತ್ರಗಳಿಗೇ ಕಲಿಕೆ ಮಾಡಿಸುವ ಕಾಲ ಇದಾಗಿದೆ. ಎಐ ಎಂದಿಗಿಂತಲೂ ವೇಗವಾಗಿ, ಆಳವಾಗಿ ಬದಲಾಗುತ್ತಿದೆ ಎಂದರು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ ಭಾರತ್ ಮಂಟಪ್ದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.