ADVERTISEMENT

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2024, 6:54 IST
Last Updated 12 ಜನವರಿ 2024, 6:54 IST
   

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ನಡೆಯುವ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 11 ದಿನಗಳ ವರೆಗೆ 'ವ್ರತ' ಆರಂಭಿಸಿದ್ದಾರೆ.

ಹಲವು ತಲೆಮಾರುಗಳ ಕನಸು ಸಾಕಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಇದರಿಂದಾಗಿ ತುಂಬಾ ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅನುಭವವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ದೇಶದ ಜನರೊಂದಿಗೆ ಎಕ್ಸ್‌/ಟ್ವಿಟರ್‌ ಮೂಲಕ ಆಡಿಯೊ ಸಂದೇಶ ಹಂಚಿಕೊಂಡಿರುವ ಅವರು, ತಮ್ಮಲ್ಲಿ ಮೂಡುತ್ತಿರುವ ಭಾವನೆಗಳನ್ನು ಅನುಭವಿಸಲಷ್ಟೇ ಸಾಧ್ಯ. ಅದರ ಆಳ, ಅಗಲ ಮತ್ತು ತೀವ್ರತೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ ಎಂದಿದ್ದಾರೆ.

ADVERTISEMENT

ಶ್ರೀರಾಮನ ಜನ್ಮ ಸ್ಥಳ ಎಂದು ಭಕ್ತರು ನಂಬಿರುವ ಪುಣ್ಯ ಭೂಮಿಯಲ್ಲಿ ಜನವರಿ 22ರಂದು ರಾಮ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿರುವ ಕ್ಷಣಕ್ಕಾಗಿ ಎಲ್ಲ ಭಾರತೀಯರು ಮತ್ತು ರಾಮ ಭಕ್ತರು ಕಾಯುತ್ತಿದ್ದಾರೆ. ಅದು ಐತಿಹಾಸಿಕ ಮತ್ತು ಪವಿತ್ರ ಸಂದರ್ಭವಾಗಿರಲಿದೆ. ಆ ಸುಸಂದರ್ಭಕ್ಕೆ ಸಾಕ್ಷಿಯಾಗಲಿರುವುದೇ ನನ್ನ ಸೌಭಾಗ್ಯ ಎಂದು ಹರ್ಷಿಸಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ವೇಳೆ ಎಲ್ಲ ಭಾರತೀಯರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು 'ಸಾಧನ'ವನ್ನಾಗಿ ಆಯ್ಕೆ ಮಾಡಿದ್ದಾನೆ. ಇದನ್ನು ಗಮನದಲ್ಲಿರಿಸಿ 11 ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತೇನೆ. ಇದಕ್ಕಾಗಿ ಜನರ ಆಶೀರ್ವಾದ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಶ್ರೀರಾಮ ಹೆಚ್ಚು ಸಮಯ ಕಳೆದ ಸ್ಥಳ ಎಂದು ನಂಬಲಾಗಿರುವ ನಾಸಿಕ್‌ನ ಪಂಚವಟಿಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸುವುದಾಗಿ ಹೇಳಿರುವ ಅವರು, ದಾರ್ಶನಿಕರ ಮಾರ್ಗದರ್ಶನದಂತೆ ಈ 11 ದಿನಗಳ ಆಧ್ಯಾತ್ಮಿಕ ಪ್ರಯಾಣ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.