ನವದೆಹಲಿ: ಸ್ಥಳೀಯ ಸಂಪ್ರದಾಯಗಳನ್ನು ಬಳಸಿಕೊಂಡು ಲಸಿಕೆ ನೀಡಿಕೆಯ ವೇಗ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಹಿಮಾಚಲ ಪ್ರದೇಶ ಹಳ್ಳಿಯೊಂದರಲ್ಲಿ ಲಸಿಕೆ ಹಿಂಜರಿಕೆ ನಿವಾರಣೆಗೆ ಸ್ಥಳೀಯ ದೇವತೆಯನ್ನು ಆವಾಹಿಸಿದ್ದ ವಿಚಾರವನ್ನು ಮೋದಿ ಉಲ್ಲೇಖಿಸಿದ್ದಾರೆ.
ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ರಾಜ್ಯದಲ್ಲಿನ ಕೋವಿಡ್ ಲಸಿಕೆ ಕಾರ್ಯಕ್ರಮದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಲಸಿಕೆ ನೀಡಿಕೆಯ ವೇಗ ಹೆಚ್ಚಿಸುವುದರಿಂದ ಯುವಕರ ಉದ್ಯೋಗದ ಮೂಲವಾಗಿರುವ ಪ್ರವಾಸೋದ್ಯಮಕ್ಕೂ ಪ್ರಯೋಜನವಾಗಲಿದೆ’ ಎಂದು ಮೋದಿ ಹೇಳಿದ್ದಾರೆ.
ಲಸಿಕೆ ಕುರಿತ ಹಿಂಜರಿಕೆಗಳನ್ನು ಹೋಗಲಾಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರೋಗ್ಯ ಕಾರ್ಯಕರ್ತರು ಪ್ರಧಾನಿಯವರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಿಮಾಚಲದ ಮಲಾನಾ ಗ್ರಾಮದಲ್ಲಿ, ಸ್ಥಳೀಯ ದೇವತೆಯನ್ನು ಆವಾಹಿಸಿ ಲಸಿಕೆ ಹಾಕುವ ಅಭಿಯಾನಕ್ಕಾಗಿ ದೇವತೆಯ ಅನುಮೋದನೆಯನ್ನು ಪಡೆಯಬೇಕಾಗಿತ್ತು ಎಂದು ಆಶಾ ಕಾರ್ಯಕರ್ತೆ ನಿರ್ಮಾ ದೇವಿ ಸಂವಾದದ ವೇಳೆ ಪ್ರಧಾನಿಯವರಿಗೆ ತಿಳಿಸಿದರು.
ಇದನ್ನೇ ಪ್ರಸ್ತಾಪಿಸಿದ ಮೋದಿಯವರು, ಸ್ಥಳೀಯ ಸಂಪ್ರದಾಯಗಳನ್ನು ಬಳಸಿಕೊಂಡು ಲಸಿಕೆ ನೀಡಿಕೆ ವೇಗ ಹೆಚ್ಚಿಸುವ ಬಗ್ಗೆ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.