ADVERTISEMENT

ಮೋದಿ ಕೃಷಿ ವ್ಯವಹಾರವನ್ನು ಇಬ್ಬರು ಮಿತ್ರರಿಗೆ ಹಸ್ತಾಂತರಿಸಲು ಬಯಸುತ್ತಾರೆ:ರಾಹುಲ್

ಪಿಟಿಐ
Published 13 ಫೆಬ್ರುವರಿ 2021, 13:35 IST
Last Updated 13 ಫೆಬ್ರುವರಿ 2021, 13:35 IST
ರಾಜಸ್ಥಾನದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದ ರಾಹುಲ್ ಗಾಂಧಿ
ರಾಜಸ್ಥಾನದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದ ರಾಹುಲ್ ಗಾಂಧಿ   

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಇಡೀ ಕೃಷಿ ವ್ಯವಹಾರವನ್ನು ಇಬ್ಬರು ಬಂಡವಾಳಶಾಹಿ ಉದ್ಯಮ ಮಿತ್ರರಿಗೆ ಹಸ್ತಾಂತರಿಸಲು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.

ರಾಜಸ್ಥಾನದ ರೂಪನ್‌ಗಢದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಶೇಕಡಾ 40ರಷ್ಟು ಜನರು ಕೃಷಿ ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ ಎಂದು ಹೇಳಿದರು.

ಕೃಷಿ ದೇಶದ 40 ಪ್ರತಿಶತ ಜನರ ವ್ಯವಹಾರವಾಗಿದೆ. ಇದರಲ್ಲಿ ರೈತರು, ಸಣ್ಣ ಹಾಗೂ ಮಧ್ಯಮ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರು ಸೇರಿದ್ದಾರೆ. ಈ ಸಂಪೂರ್ಣ ವ್ಯವಹಾರವನ್ನು ನರೇಂದ್ರ ಮೋದಿ ಇಬ್ಬರು ಮಿತ್ರರಿಗೆ ನೀಡಲು ಬಯಸುತ್ತಿದ್ದಾರೆ. ಇದುವೇ ಕೃಷಿ ಕಾಯ್ದೆಯ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಆಯ್ಕೆಯನ್ನು ನೀಡುವುದಾಗಿ ದೇಶದ ಪ್ರಧಾನಿ ಹೇಳಿದ್ದಾರೆ. ಅದೇನೆಂದರೆ ಹಸಿವು, ನಿರುದ್ಯೋಗ ಮತ್ತು ಆತ್ಮಹತ್ಯೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರಾಹುಲ್ ಗಾಂಧಿ ಧ್ವೆನಿಯೆತ್ತಿದರು. ಮೊದಲ ಕಾನೂನು ಮಂಡಿ ವ್ಯವಸ್ಥೆಯನ್ನು ನಿರ್ನಾಮ ಮಾಡಲಿದೆ. ಎರಡನೇಯದ್ದು ಉದ್ಯಮಿಗಳಿಗೆ ಬೆಳೆಯನ್ನು ಅನಿಯಂತ್ರಿತ ದಾಸ್ತಾನು ಮಾಡಿಡಲು ನೆರವಾಗಲಿದೆ. ಮತ್ತು ಮೂರನೇಯದ್ದು ನ್ಯಾಯಾಲಯಗಳಿಗೆ ಸಮೀಪಿಸುವ ರೈತರ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಎಂದು ಹೇಳಿದರು.

ಟ್ರ್ಯಾಕ್ಟರ್ ಚಾಲನೆ ಮಾಡಿದ ರಾಹುಲ್ ಗಾಂಧಿ...
ರಾಜಸ್ಥಾನದ ಸಾಂಪ್ರಾದಾಯಿಕ ಪೇಟಾ ಧರಿಸಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಾ ರಾಹುಲ್ ಗಾಂಧಿ ರ‍್ಯಾಲಿ ಸ್ಥಳವನ್ನು ತಲುಪಿದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಉಪಸ್ಥಿತರಿದ್ದರು. ಬಳಿಕ ನಾಗೌರ್‌ನ ಮಕ್ರಾನದಲ್ಲಿ ಮಗದೊಂದು ರ‍್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಬೆನ್ನೆಲುಬನ್ನು ಮುರಿಯಲಾಗಿದೆ ಎಂದು ಆರೋಪಿಸಿದರು.

ಯುವಕರಿಂದ ಭವಿಷ್ಯವನ್ನು ಕಸಿದುಕೊಳ್ಳಲಾಗಿದೆ. ನಿಮ್ಮ ಕಣ್ಣ ಮುಂದೆಯೇ ದೇಶದ ಬೆನ್ನೆಲುಬು ಮುರಿಯಲಾಗುತ್ತಿದೆ. ನೋಟು ಅಮಾನ್ಯೀಕರಣದಿಂದ ಇದು ಪ್ರಾರಂಭವಾಯಿತು. ಅದರ ಬಳಿಕ ಗಬ್ಬರ್ ಸಿಂಗ್ ಜಿಎಸ್‌ಟಿ ತೆರಿಗೆಯನ್ನು ಜಾರಿಗೆ ತಂದು ಸಣ್ಣ ಉದ್ಯಮದವರಿಗೆ ಹೊಡೆತ ನೀಡಲಾಯಿತು ಎಂದು ವಾಗ್ದಾಳಿ ನಡೆಸಿದರು.

ಇಬ್ಬರು ಮೂವರು ಉದ್ಯಮಿಗಳ ಹಾದಿ ಸುಗಮಗೊಳಿಸಲು ರೈತರು, ಕಾರ್ಮಿಕರು ಹಾಗೂ ವ್ಯಾಪಾರಿಗಳನ್ನು ಬದಿಗೊತ್ತಲಾಗಿದೆ. ಕೋವಿಡ್-19 ಪಿಡುಗಿನ ಸಮಯದಲ್ಲಿ ರೈತರು ಮನೆಗೆ ಹೋಗಲು ಟಿಕೆಟ್ ಹಣವನ್ನು ನೀಡುವಂತೆ ಪ್ರಧಾನಿಯನ್ನು ವಿನಂತಿಸಿದರು. ಆದರೆ ಅವರು ಅದನ್ನು ಮಾಡಲಿಲ್ಲ. ಬದಲಾಗಿ ಶ್ರೀಮಂತರ 1.5 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದರು ಎಂದರು.

ಸತ್ಯವನ್ನು ಹೇಳುವುದು ನನ್ನ ಕರ್ತವ್ಯವಾಗಿದ್ದು, ಕೇಳುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ ಎಂದು ರಾಹುಲ್ ಗಾಂಧಿ ಹೇಳಿದರು.

ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಕೊರೊನಾ ವೈರಸ್‌ನಿಂದ 'ಭಾರತಾ ಮಾತಾ' ತೀವ್ರ ನಷ್ಟವನ್ನು ಎದುರಿಸಲಿದೆ ಎಂದು ನಾನು 10-15 ಬಾರಿ ಹೇಳಿದ್ದೆ. ರೈತರು, ಕಾರ್ಮಿಕರು, ಬಡವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದೂ ಹೇಳಿದ್ದೆ. ಅದು ಮಾಧ್ಯಮದವರು ನಾನು ರೈತನಲ್ಲ, ರಾಷ್ಟ್ರ ವಿರೋಧಿ ಎಂದು ಹೀಯಾಳಿಸಿದರು ಎಂದು ವಿವರಿಸಿದರು.

ಇದನ್ನೂ ಓದಿ:

ದೆಹಲಿ ಪ್ರತಿಭಟನೆಯಲ್ಲಿ ಮೃತಪಟ್ಟ 200 ರೈತರಿಗೆ ಗೌರವ ಸೂಚಕವಾಗಿ ನಾನು ಸಂಸತ್ತಿನಲ್ಲಿ ಮೌನ ವಹಿಸಿದ್ದೇನೆ. ಆದರೆ ಬಿಜೆಪಿಯ ಒಬ್ಬನೇ ಒಬ್ಬ ಸಂಸದ ಎದ್ದು ನಿಂತು ಗೌರವ ಸೂಚಿಸಲಿಲ್ಲ. ನಾನು ಲಿಖಿತವಾಗಿ ಬರೆದು ನೀಡಬೇಕೆಂದು ಸ್ಪೀಕರ್ ಹೇಳಿದ್ದಾರೆ. ನಾನೀಗ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸೇಬೇಕೆಂದು ಸ್ಪೀಕರ್‌ಗೆ ಲಿಖಿತವಾಗಿ ಬರೆದು ನೀಡಲಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.