ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಫೇಲ್ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪಿಯೂಷ್ ಗೊಯೆಲ್ ಅವರು, ಇದೇ ರಫೇಲ್ ವಿಚಾರವನ್ನಿಟ್ಟುಕೊಂಡು 2024ರ ಚುನಾವಣೆ ಎದುರಿಸುವಂತೆ ರಾಹುಲ್ ಗಾಂಧಿ ಅವರಿಗೆ ಸವಾಲು ಎಸೆದರು.
ಯುದ್ಧೋಪಕರಣಗಳ ಖರೀದಿ ಕುರಿತ ವಿದೇಶಿ ಕಂಪನಿಗಳ ಜೊತೆಗಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಲೆಕ್ಕ ಪರಿಶೋಧಕರು ಮತ್ತು ನಿಯಂತ್ರಕರಿಗೆ (ಸಿಎಜಿ) ವರದಿ ಸಲ್ಲಿಸಿದ್ದು, ಅದರಲ್ಲಿ ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಸ್ತಾವವೇ ಇಲ್ಲ ಎಂಬ ಮಾಧ್ಯಮಗಳ ವರದಿ ಉಲ್ಲೇಖಿಸಿ ಟ್ವಿಟರ್ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರಫೇಲ್ ಒಪ್ಪಂದದ ಮೂಲಕ ಭಾರತದ ಬೊಕ್ಕಸದಿಂದ ಹಣ ಲೂಟಿ ಮಾಡಲಾಗಿದೆ ಎಂದು ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ತಮ್ಮ ಟ್ವೀಟ್ನಲ್ಲಿ ಮಹಾತ್ಮಾ ಗಾಂಧೀಜಿ ಅವರ ಉಕ್ತಿಯೊಂದನ್ನೂ ರಾಹುಲ್ ಉಲ್ಲೇಖಿಸಿದ್ದಾರೆ. ‘ ಸತ್ಯ ಒಂದು, ಮಾರ್ಗಗಳು ಬೇರೆ ಬೇರೆ,’ ಎಂದು ಅವರು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೊಯಲ್, ‘ರಫೇಲ್ ಮೇಲಿನ ರಾಹುಲ್ ಗಾಂಧಿ ಅವರ ಗೀಳು ಕಾಂಗ್ರೆಸ್ಗೆ ಹಾನಿ ಮಾಡುತ್ತಿದೆ ಎಂದು ಹಲವು ಕಾಂಗ್ರೆಸ್ ನಾಯಕರು ನಂಬಿದ್ದಾರೆ,’ ಎಂದು ವ್ಯಂಗ್ಯವಾಡಿದರು.
‘ತಮ್ಮ ತಂದೆಯ ಪಾಪಗಳನ್ನು ತೊಳೆದುಕೊಳ್ಳುವ ರಾಹುಲ್ ಗಾಂಧಿ ಅವರ ರಫೇಲ್ ಗೀಳು ಕಾಂಗ್ರೆಸ್ಗೆ ಹಾನಿ ಮಾಡುತ್ತಿದೆ ಎಂದು ಅವರ ಮಿತ್ರರೇ ಹೇಳಿದ್ದಾರೆ. ಆದರೆ, ವ್ಯಕ್ತಿಯೊಬ್ಬ ಸ್ವಯಂ ವಿನಾಶಕ್ಕೆ ದೂಡಿಕೊಂಡಿರುವಾಗ ದೂರಲು ನಾವು ಯಾರು? ರಫೇಲ್ ವಿಚಾರದ ಮೇಲೆ 2024ರ ಲೋಕಸಭೆ ಚುನಾವಣೆಯನ್ನು ರಾಹುಲ್ ಗಾಂಧಿ ಎದಿರಿಸಲಿ,’ ಎಂದು ಪಿಯೂಷ್ ಗೊಯೆಲ್ ಸವಾಲು ಹಾಕಿದರು
ರಫೇಲ್ ಒಪ್ಪಂದದ ವಿಚಾರವಾಗಿ ರಾಹುಲ್ ಗಾಂಧಿ ಅವರು 2019ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.