ADVERTISEMENT

ಭಾಗವತ್‌ಗೆ ಸಿಹಿ ನೀಡಿ ಸ್ವಾಗತಿಸಿ, ಗಲಭೆಯಾಗದಂತೆ ಎಚ್ಚರವಹಿಸಿ: ಪೊಲೀಸರಿಗೆ ಮಮತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2022, 7:21 IST
Last Updated 18 ಮೇ 2022, 7:21 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ‘ನಮ್ಮ ರಾಜ್ಯಕ್ಕೆ ಭೇಟಿ ನೀಡಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಿಹಿ, ಹೂ ಗುಚ್ಛಗಳನ್ನು ನೀಡಿ ಸ್ವಾಗತಿಸಿ. ಆದರೆ, ಯಾವುದೇ ಗಲಭೆಗಳು ನಡೆಯದಂತೆ ಎಚ್ಚರವಹಿಸಿ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿರುವ ಮಮತಾ, ‘ಆರ್‌ಎಸ್‌ಎಸ್‌ ಮುಖ್ಯಸ್ಥರ ವಾಸ್ತವ್ಯದ ಉದ್ದೇಶವೇನು’ ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರದ ಪರವಾಗಿ ನೀವು (ಅಧಿಕಾರಿಗಳು) ಅವರಿಗೆ ಸಿಹಿ ತಿಂಡಿ ಮತ್ತು ಹೂ ಗುಚ್ಛ, ಹಣ್ಣುಗಳನ್ನು ಕಳುಹಿಸಬಹುದು. ಅತಿಥಿಗಳನ್ನು ನಾವು ಎಷ್ಟು ಸೌಹಾರ್ದಯುತವಾಗಿ ನಡೆಸಿಕೊಳ್ಳುತ್ತೇವೆ ಎಂಬುದನ್ನು ಅವರು ಅರಿತುಕೊಳ್ಳಲಿ’ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.

ಮೋಹನ್ ಭಾಗವತ್‌ಗೆ ಸೂಕ್ತ ರಕ್ಷಣೆ ಒದಗಿಸಿ. ಯಾವುದೇ ಗಲಭೆಗಳು ನಡೆಯದಂತೆ ನೋಡಿಕೊಳ್ಳಿ’ ಎಂದು ಪೊಲೀಸ್ ಅಧಿಕಾರಿಗಳಿಗೆ ಬ್ಯಾನರ್ಜಿ ಸೂಚಿಸಿದ್ದಾರೆ.

ಮಮತಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಆರ್‌ಎಸ್‌ಎಸ್ ಕಾರ್ಯಕಾರಿ ದೇಬಾಸಿಸ್ ಚೌಧರಿ, ‘ಮಮತಾ ಬ್ಯಾನರ್ಜಿ ಅವರು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಆಸಕ್ತಿವಹಿಸುತ್ತಿರುವುದು ಕುತೂಹಲ ಮೂಡಿಸುತ್ತಿದೆ. ಇದೇ ವೇಳೆ ಇಸ್ಲಾಮಿಕ್ ಸಂಘಟನೆಗಳು ನಡೆಸುತ್ತಿರುವ ತಬ್ಲೀಗ್‌ ಜಮಾತ್‌ ಶಿಬಿರಗಳಿಗೆ ಭೇಟಿ ನೀಡುವಂತೆ ನಾವು ಅವರನ್ನು ಒತ್ತಾಯಿಸುತ್ತೇವೆ’ ಎಂದು ಆಗ್ರಹಿಸಿದ್ದಾರೆ.

ಮಮತಾ ಬ್ಯಾನರ್ಜಿಯವರು ಒಂದು ಬಾರಿ ಆರ್‌ಎಸ್‌ಎಸ್‌ ಶಿಬಿರಕ್ಕೆ ಭೇಟಿ ನೀಡಿದರೆ ಒಳ್ಳೆಯದು ಎಂದು ಚೌಧರಿ ಹೇಳಿದ್ದಾರೆ.

ಬಂಗಾಳದ ಮಿಡ್ನಾಪುರ ಜಿಲ್ಲೆಯ ಕೇಶಿಯಾರಿದಲ್ಲಿ ಮೇ 17ರಿಂದ ಮೇ 20ರವರೆಗೆ ತರಬೇತಿ ಶಿಬಿರ ನಡೆಯಲಿದೆ. 4 ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಮೋಹನ್ ಭಾಗವತ್ ಉಪಸ್ಥಿತರಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.