ADVERTISEMENT

ಕೇಂದ್ರ ಸಂಪುಟ ಪುನರ್‌ರಚನೆ: ಕರ್ನಾಟಕದ‌ ಕೈಯಲ್ಲಿ ಮಹತ್ವದ ಖಾತೆಗಳು

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 7:15 IST
Last Updated 8 ಜುಲೈ 2021, 7:15 IST
ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ
ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಮಂತ್ರಿ ಪರಿಷತ್‌ನಿಂದ 12 ಸಚಿವರನ್ನು ಕೈಬಿಟ್ಟಿದ್ದಾರೆ. ಕರ್ನಾಟಕದ ನಾಲ್ವರು ಸೇರಿದಂತೆ 36 ಹೊಸ ಮುಖಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಹಲವು ಮಹತ್ವದ ಖಾತೆಗಳ ನಿರ್ವಹಣೆಯ ಹೊಣೆಯು ರಾಜ್ಯದ ಸಂಸದರ ಪಾಲಿಗಿದೆ.

ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯಂತಹ ಮಹತ್ವದ ಖಾತೆ ಹೊಂದಿದ್ದ ಡಿ.ವಿ. ಸದಾನಂದಗೌಡರು ಸಚಿವ ಸ್ಥಾನ ಕಳೆದುಕೊಂಡರೂ, ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಮೂರನೇ ಅವಧಿಗೆ ರಾಜ್ಯಸಭೆಯ ಸದಸ್ಯರಾಗಿರುವ ಉದ್ಯಮಿ ರಾಜೀವ್‌ ಚಂದ್ರಶೇಖರ್‌, ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ ಮತ್ತು ಬೀದರ್ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಭಗವಂತ ಖೂಬಾ ಅವರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಲ್ಹಾದ್‌ ಜೋಶಿ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಕರ್ನಾಟಕ ಪ್ರತಿನಿಧಿಸುವ ಆರು ಕೇಂದ್ರ ಸಚಿವರ ಕೈಯಲ್ಲಿ ಮಹತ್ವದ ಖಾತೆಗಳಿವೆ. ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳು, ಕೌಶಲ ಅಭಿವೃದ್ಧಿ, ಕೃಷಿ ಮತ್ತು ರೈತರ ಅಭಿವೃದ್ಧಿ, ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಾಮಾಜಿಕ ನ್ಯಾಯ ಸೇರಿ ಹಲವು ಖಾತೆಗಳು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರ ನಿರ್ವಹಣೆಯಲ್ಲಿವೆ.

ಒಟ್ಟು 15 ಮಂದಿ ಸಂಪುಟ ದರ್ಜೆ ಮತ್ತು 28 ಮಂದಿ ಕಿರಿಯ ಸಚಿವರಾಗಿ ಪ್ರಮಾಣ ವಚನ ಪಡೆದುಕೊಂಡಿದ್ದಾರೆ. ಹಾಗಾಗಿ, ಕೇಂದ್ರ ಸಚಿವ ಸಂಪುಟದ ಸದಸ್ಯರ ಸಂಖ್ಯೆಯು 81ಕ್ಕೆ ಏರಿಕೆಯಾಗಿದೆ.

ಕರ್ನಾಟಕ ಪ್ರತಿನಿಧಿಸುವ ಕೇಂದ್ರದ ಆರು ಸಚಿವರು ಮತ್ತು ಖಾತೆಗಳು:

* ಪ್ರಲ್ಹಾದ್ ಜೋಶಿ– ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ
* ನಿರ್ಮಲಾ ಸೀತಾರಾಮನ್– ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ
* ರಾಜೀವ್‌ ಚಂದ್ರಶೇಖರ್‌-(ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ)
* ಶೋಭಾ ಕರಂದ್ಲಾಜೆ-(ಕೃಷಿ ಮತ್ತು ರೈತರ ಅಭಿವೃದ್ಧಿ)
* ಎ. ನಾರಾಯಣ ಸ್ವಾಮಿ-(ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ)
* ಭಗವಂತ ಖೂಬಾ- (ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ)

ಇನ್ನಷ್ಟು ಓದು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.