ನವದೆಹಲಿ:ದೇಶದ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವಿಟರ್ನಲ್ಲಿ ಕಾಲೆಳೆದಿದ್ದಾರೆ.
‘ಸರಿಯಾಗಿ ಕ್ಯಾಚ್ ಪಡೆಯಬೇಕಾದರೆ ಕೊನೆಯ ಕ್ಷಣದವರೆಗೂ ಚೆಂಡಿನ ಮೇಲೆ ದೃಷ್ಟಿ ಇರಿಸುವುದು ಮತ್ತು ಕ್ರೀಡಾ ಸ್ಫೂರ್ತಿಅಗತ್ಯ. ಇಲ್ಲವಾದರೆ ಗುರುತ್ವಾಕರ್ಷಣೆ, ಗಣಿತ, ಓಲಾ–ಉಬರ್ ಇನ್ನಿತರ ಸಂಗತಿಗಳತ್ತ ಅನವಶ್ಯಕವಾಗಿ ಬೊಟ್ಟುಮಾಡಬೇಕಾಗುತ್ತದೆ’
‘ದೇಶದ ಆರ್ಥಿಕತೆಗಾಗಿ ಸಾರ್ವಜನಿಕೆ ಹಿತಾಸಕ್ತಿಯ ದೃಷ್ಟಿಯಿಂದ ಈ ರೀತಿ ಪ್ರಕಟಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಜೊತೆಗೆ ಕ್ರಿಕೆಟ್ ಪಂದ್ಯವೊಂದರಲ್ಲಿ ಕ್ಯಾಚ್ ಪಡೆಯುವ ತುಣುಕನ್ನೂ ಹರಿಬಿಟ್ಟಿದ್ದಾರೆ.
ಆರ್ಥಿಕತೆಯ ಬಗ್ಗೆ ಗುರುವಾರ ಮಾತನಾಡಿದ್ದ ಗೋಯಲ್, ‘ಟಿವಿಯಲ್ಲಿ ಪ್ರಸಾರವಾಗುವ ಲೆಕ್ಕಾಚಾರಗಳ ಬಗ್ಗೆ ಗಮನಕೊಡಬೇಡಿ. ವಾಸ್ತವವೇ ಬೇರೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೀವು ನೋಡುತ್ತಿದ್ದರೆ ದೇಶವು ಶೇ 12ರಷ್ಟು ವೃದ್ಧಿ ದರ ಕಾಣಬೇಕು. ಈಗ ಆರ್ಥಿಕ ವೃದ್ಧಿ ದರವು ಶೇ 6ರಷ್ಟಾಗಿದೆ. ಆ ಲೆಕ್ಕಾಚಾರಗಳನ್ನು ಗಮನಿಸಬೇಡಿ. ಅಂಥ ಲೆಕ್ಕಾಚಾರಗಳು ಐನ್ಸ್ಟೀನ್ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯುವಲ್ಲಿ ಯಾವತ್ತಿಗೂ ಸಹಕಾರಿಯಾಗಿರಲಿಲ್ಲ’ ಎಂದು ಹೇಳಿದ್ದರು.
ನಿರ್ಮಲಾ ಸೀತಾರಾಮನ್ ಅವರು, ಹೊಸ ಪೀಳಿಗೆಯವರು ಸಂಚಾರಕ್ಕೆ ಉಬರ್ ಮತ್ತು ಓಲಾ ಕ್ಯಾಬ್ಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ವಾಹನ ಮಾರಾಟ ಕುಸಿತಕ್ಕೆ ಇದೂ ಕಾರಣ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.