ADVERTISEMENT

ಕೃಷಿ ಕಾಯ್ದೆಗಳನ್ನು 18 ತಿಂಗಳು ಅಮಾನತಿನಲ್ಲಿಡುವ ಕೇಂದ್ರದ ಪ್ರಸ್ತಾವ ತಿರಸ್ಕಾರ

ಪಿಟಿಐ
Published 21 ಜನವರಿ 2021, 16:09 IST
Last Updated 21 ಜನವರಿ 2021, 16:09 IST
   

ದೆಹಲಿ: ಕೃಷಿಗೆ ಸಂಬಂಧಿಸಿದ ಮೂರು ವಿವಾದಾತ್ಮಕ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಂಟಿ ಸಮಿತಿ ರಚಿಸುವ ಸರ್ಕಾರದ ಪ್ರಸ್ತಾವವನ್ನು ರೈತ ಸಂಘಟನೆಗಳು ಗುರುವಾರ ತಿರಸ್ಕರಿಸಿವೆ.

ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ದೆಹಲಿಯ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಮಾತೃ ಸಂಸ್ಥೆ 'ಸಂಯುಕ್ತ ಕಿಸಾನ್‌ ಮೋರ್ಚಾ' ಈ ನಿರ್ಧಾರವನ್ನು ಪ್ರಕಟಿಸಿದೆ.

ಬುಧವಾರ ಸರ್ಕಾರವು ರೈತ ಸಂಘಗಳ ಮುಂದಿಟ್ಟ ಪ್ರಸ್ತಾವವನ್ನು ತಿರಸ್ಕರಿಸುವ ನಿರ್ಧಾರವನ್ನು ಸಂಯುಕ್ತ ಕಿಸಾನ್‌ ಮೋರ್ಚಾದ ಪ್ರಧಾನ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ADVERTISEMENT

'ಈ ಚಳವಳಿಯಲ್ಲಿ ಇದುವರೆಗೆ ಹುತಾತ್ಮರಾದ 143 ರೈತರಿಗೆ ಸಂಘಟನೆಯು ಗೌರವ ಸಲ್ಲಿಸುತ್ತದೆ. ಈ ಆಂದೋಲನದಲ್ಲಿ ನಮ್ಮ ಒಡನಾಡಿಗಳು ನಮ್ಮನ್ನು ಅಗಲಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ. ಈ ಕೃಷಿ ಕಾನೂನುಗಳನ್ನು ರದ್ದಾಗದೇ ನಾವು ಹಿಂತಿರುಗುವುದಿಲ್ಲ, ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಪೂರ್ಣವಾಗಿ ರದ್ದುಪಡಿಸುವುದು, ಎಂಎಸ್‌ಪಿಗೆ ಕಾನೂನು ರೂಪಿಸುವುದು ಚಳವಳಿಯ ಮುಖ್ಯ ಉದ್ದೇಶ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.