ನವದೆಹಲಿ: ಆಮ್ ಆದ್ಮಿ ಪಕ್ಷವು (ಎಎಪಿ) ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಐದು ಜನರನ್ನು ರಾಜ್ಯಸಭೆಗೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದೆ. ಮಾರ್ಚ್ 31ರಂದು ರಾಜ್ಯಸಭೆಗೆ ಚುನಾವಣೆ ನಿಗದಿಯಾಗಿದೆ.
ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಶಾಸಕ ರಾಘವ್ ಛಡ್ಡಾ, ಐಐಟಿ ದೆಹಲಿ ಪ್ರೊಫೆಸರ್ ಡಾ.ಸಂದೀಪ್ ಪಾಠಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಪಂಜಾಬ್ನ ಉದ್ಯಮಿ ಸಂಜೀವ್ ಅರೋರಾ ಅವರನ್ನು ಎಎಪಿ ರಾಜ್ಯಸಭೆಗೆ ಆಯ್ಕೆ ಮಾಡಲು ನಿರ್ಧರಿಸಿದೆ.
ಇಂದು ಐವರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭೆಯ ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪಂಜಾಬ್ನ ಶಾಸಕರು ಐವರು ಸಂಸದರ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಕೇರಳದಿಂದ ಮೂವರು, ಅಸ್ಸಾಂನಿಂದ ಇಬ್ಬರು, ಹಿಮಾಚಲ ಪ್ರದೇಶ, ನಾಗಾಲೆಂಡ್ ಹಾಗೂ ತ್ರಿಪುರಾದಿಂದ ತಲಾ ಒಬ್ಬ ಸಂಸದರ ಆಯ್ಕೆಗೆ ಚುನಾವಣೆ ನಡೆಯಲಿದೆ.
ದೆಹಲಿ ಜೊತೆಗೆ ಪಂಜಾಬ್ನಲ್ಲೂ ಎಎಪಿ ಸರ್ಕಾರ ವಿಸ್ತರಿಸಿರುವುದರಿಂದ ರಾಜ್ಯಸಭೆಯಲ್ಲಿ ಪಕ್ಷಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಪ್ರಸ್ತುತ ಮೇಲ್ಮನೆಯಲ್ಲಿ ದೆಹಲಿಯಿಂದ ಆಯ್ಕೆಯಾಗಿರುವ ಎಎಪಿಯ ಮೂವರು ಸಂಸದರಿದ್ದಾರೆ.
ಪಂಜಾಬ್ನ 117 ವಿಧಾನಸಭಾ ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳಲ್ಲಿ ಎಎಪಿ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.