ನವದೆಹಲಿ: ವಿವಿಧ ಕಾರ್ಯತಂತ್ರದ ಭಾಗವಾಗಿ ಹಿಂದೂಮಹಾಸಾಗರದಲ್ಲಿ (ಐಒಆರ್) 120 ಯುದ್ಧನೌಕೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶುಕ್ರವಾರ ಹೇಳಿದರು.
ಜಾಗತಿಕ ಭದ್ರತೆ ಕುರಿಂತೆ ಆನ್ಲೈನ್ ಮೂಲಕ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ಯುದ್ಧದ ಕಾರ್ಯತಂತ್ರದ ದೃಷ್ಟಿಯಿಂದ ಅನೇಕ ದೇಶಗಳು ಹಿಂದೂಮಹಾಸಾಗರದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಲು ಮುಂದಾಗುತ್ತಿವೆ. ಬರುವ ದಿನಗಳಲ್ಲಿ ಈ ಪ್ರವೃತ್ತಿ ಇನ್ನೂ ಹೆಚ್ಚಲಿದೆ’ ಎಂದರು.
‘ನೆರೆಯ ರಾಷ್ಟ್ರವೊಂದು ಪ್ರಬಲ ಸ್ಪರ್ಧೆಯೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಂಡು ಜಾಗತಿಕವಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕಿದೆ’ ಎಂದು ಅವರು ಚೀನಾ ಹೆಸರು ಪ್ರಸ್ತಾಪಿಸದೇ ಹೇಳಿದರು.
‘ಭೌಗೋಳಿಕ ಮತ್ತು ರಾಜಕೀಯ ಕಾರ್ಯತಂತ್ರದ ದೃಷ್ಟಿಯಿಂದಲೂ ಹಿಂದೂಮಹಾಸಾಗರಕ್ಕೆ ಮಹತ್ವ ಇದೆ. ಈ ಕಾರಣದಿಂದಾಗಿಯೂ ಇತರ ದೇಶಗಳು ಈ ಸಾಗರ ಪ್ರದೇಶದ ಮೇಲೆ ಕಣ್ಣಿಟ್ಟಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.