ನವದೆಹಲಿ: ‘ದೇಶದಲ್ಲಿ ಕೊರೊನಾ ವೈರಸ್ ಸೋಂಕು ಗಣನೀಯವಾಗಿ ಹೆಚ್ಚುತ್ತಿದೆ. ನಾವು ಲಾಕ್ಡೌನ್ ತೆರವುಗೊಳಿಸುತ್ತಿದ್ದೇವೆ. ಲಾಕ್ಡೌನ್ ಉದ್ದೇಶ ವಿಫಲವಾಗಿದೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
‘ವಿಫಲವಾದ ಲಾಕ್ಡೌನ್ನ ಪರಿಣಾಮವನ್ನು ಭಾರತವೀಗ ಎದುರಿಸುತ್ತಿದೆ. ದೇಶದಲ್ಲಿ ಸೋಂಕು ಗಣನೀಯವಾಗಿ ಹಬ್ಬುತ್ತಿದೆ. ಈಗ ನಿಮ್ಮ ಯೋಜನೆಯೇನು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಪ್ರಶ್ನಿಸಿದ್ದಾರೆ.
‘ಭಾರದತ ಜಿಡಿಪಿ ಶೇ 1ಕ್ಕಿಂತಲೂ ಕಡಿಮೆ ಇದೆ. ಲಾಕ್ಡೌನ್ ಉದ್ದೇಶ ವಿಫಲವಾಗಿದೆ ಎಂಬುದು ಸ್ಪಷ್ಟ. ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳು ಕೊರೊನಾ ವಿರುದ್ಧ ಒಂಟಿಯಾಗಿ ಹೋರಾಡುತ್ತಿದ್ದಾರೆ. ಹಾಗಿದ್ದರೆ ಕೇಂದ್ರ ಸರ್ಕಾರದ ಯೋಜನೆಯೇನು? ಹಣಕಾಸು ಹರಿವಿನ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ದಿವಾಳಿಯಾಗಲಿವೆ. ನಾಲ್ಕು ಹಂತಗಳ ಲಾಕ್ಡೌನ್ನಿಂದ ಪ್ರಧಾನಿಯವರು ನಿರೀಕ್ಷಿಸಿದಷ್ಟು ಉತ್ತಮ ಫಲಿತಾಂಶ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
‘ಕೊರೊನಾ ವೈರಸ್ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ದಿವಾಳಿಯಾಗಲಿವೆ. ಈ ಉದ್ದಿಮೆಗಳಿಗೆ ಬಂಡವಾಳ ಹರಿಸುವ ತುರ್ತು ಅಗತ್ಯವಿದೆ. ಹೀಗೆ ಮಾಡದಿದ್ದರೆ ಪರಿಣಾಮ ಮಾರಕವಾಗಿರಲಿದೆ. ಈ ವಿಚಾರದಲ್ಲಿ ಪ್ರಧಾನಿಯವರ ತಂತ್ರಗಾರಿಕೆ ಏನು? ಲಾಕ್ಡೌನ್ ಅನ್ನು ಹೇಗೆ ನಿರ್ವಹಿಸಲಿದ್ದಾರೆ? ಕಾರ್ಮಿಕರಿಗೆ ಯಾವ ರೀತಿ ಸಹಾಯ ಮಾಡಲಿದ್ದಾರೆ? ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಹೋದರ ಸಹೋದರಿಯರಿಗೆ ಹೇಗೆ ನೆರವಾಗಲಿದ್ದಾರೆ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಇದು ರಾಜಕೀಯವಲ್ಲ. ನನ್ನ ಕಳಕಳಿ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.