ನವದೆಹಲಿ: ಪಕ್ಷದಲ್ಲಿ ಯಾವುದೇ ಆಂತರಿಕ ಕಲಹಗಳನ್ನು ತಳ್ಳಿ ಹಾಕಿರುವ ಕಾಂಗ್ರೆಸ್, ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಅವರೇ ಸೂಕ್ತ ವ್ಯಕ್ತಿ ಎಂದು ಪುನರುಚ್ಛಿಸಿದೆ.
ಕಾಂಗ್ರೆಸ್ ಪಕ್ಷವು ಒಂದು ಕುಟುಂಬವಾಗಿ ಒಗ್ಗಟ್ಟಿನಿಂದ ನಿಂತಿದ್ದು, ಪಕ್ಷದ ಅಧ್ಯಕ್ಷರ ಚುನಾವಣೆ ಘೋಷಣೆಯ ನಂತರ ಯಾವುದೇ ಭಿನ್ನಭಿಪ್ರಾಯಗಳು ಉಂಟಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿಕೆ ನೀಡಿದರು.
ಸೋನಿಯಾ ಗಾಂಧಿ ಹಾಗೂ 23 ಪ್ರಮುಖ ಮುಖಂಡರ ನಡುವೆ ಶನಿವಾರ ನಡೆಯಲಿರುವ ಸಭೆಗೂ ಮುಂಚಿತವಾಗಿ ಇಂತಹದೊಂದು ಅಭಿಪ್ರಾಯ ವ್ಯಕ್ತವಾಗಿದೆ. ಅವರೆಲ್ಲರು ಸಕ್ರಿಯ ನಾಯಕತ್ವವನ್ನು ಕೋರಿದ್ದು, ಗಾಂಧಿ ಯಾವಾಗಲೂ ಮಾರ್ಗದರ್ಶಕ ಶಕ್ತಿಯಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.
ಸೋನಿಯಾ ಗಾಂಧಿ ಭೇಟಿ ಮಾಡುವ ಕಾಂಗ್ರೆಸ್ ನಿಯೋಗದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಮೇಲ್ಮನೆ ಪಕ್ಷದ ಉಪನಾಯಕ ಆನಂದ್ ಶರ್ಮಾ, ಮಾಜಿ ಸಚಿವ ಪಿ ಚಿದಂಬರಂ, ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚವಾಣ್ ಮತ್ತು ಶಶಿ ತರೂರ್ ಇರಲಿದ್ದಾರೆ.
ರಾಹುಲ್ ಗಾಂಧಿ ಕೂಡಾ ಸಭೆಯಲ್ಲಿ ಹಾಜರಾಗಲಿದ್ದಾರೆ ಎಂಬುದನ್ನು ಮೂಲಗಳು ಖಚಿತಪಡಿಸಿದೆ.
2019ರಲ್ಲಿ ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪರಿಣಾಮ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಯಬೇಕಾಯಿತು.
ಪಕ್ಷವನ್ನು ಮುನ್ನಡೆಸಲು ಹಾಗೂ ನರೇಂದ್ರ ಮೋದಿ ಸರಕಾರವನ್ನು ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂಬುದು ನನ್ನ ನಂಬಿಕೆ ಮತ್ತು ಶೇಕಡಾ 99.9ರಷ್ಟು ನಾಯಕರು ಹಾಗೂ ಕಾರ್ಯಕರ್ತರ ನಂಬಿಕೆಯಾಗಿದೆ ಎಂದು ಸುರ್ಜೇವಾಲಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.