ನವದೆಹಲಿ: ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ₹100 ದಾಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ತೆರಿಗೆ ಸಂಗ್ರಹದ ಸಾಂಕ್ರಾಮಿಕದ ಅಲೆಗಳು ನಿರಂತರವಾಗಿ ಬರುತ್ತಿವೆ‘ ಎಂದು ಟೀಕಿಸಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ದೇಶದ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ನೀವೆಲ್ಲರೂ ಪೆಟ್ರೋಲ್ ಬಂಕ್ನಲ್ಲಿ ಬಿಲ್ ಪಾವತಿಸುವಾಗ, ಮೋದಿ ಸರ್ಕಾರ ಹಣದುಬ್ಬರ ಹೆಚ್ಚಿಸಿರುವುದನ್ನು ನೋಡುತ್ತೀರಿ. ತೆರಿಗೆ ಸಂಗ್ರಹದಂತಹ ಸಾಂಕ್ರಾಮಿಕದ ಅಲೆಗಳು ನಿರಂತರವಾಗಿ ಬರುತ್ತಿವೆ‘ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರು ‘ಪೆಟ್ರೋಲ್ ಬೆಲೆ ಏರಿಸುವ ಮೂಲಕ ಸರ್ಕಾರ ಸಾರ್ವಜನಿಕರನ್ನು ಮಿತಿಮೀರಿ ಲೂಟಿ ಮಾಡುತ್ತಿದೆ. ಇದಕ್ಕೆ ಮೋದಿ ಸರ್ಕಾರವೇ ಕಾರಣ‘ ಎಂದು ದೂರಿದ್ದಾರೆ.
ಕಳೆದ 13 ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ಗೆ ಕ್ರಮವಾಗಿ ₹25.72 ಮತ್ತು ₹23.93 ರಷ್ಟು ಹೆಚ್ಚಾಗಿದೆ. ಇದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ಹೆಚ್ಚುವರಿಯಾಗಿ ಲೂಟಿ ಮಾಡುತ್ತಿರುವ ಪ್ರಕ್ರಿಯೆ‘ ಎಂದು ಸುರ್ಜೇವಾಲ ದೂರಿದ್ದಾರೆ.
ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರ್ಗೆ ₹100 ದಾಟಿದೆ. ಇದು ಮೋದಿ ಸರ್ಕಾರ ಹೆಚ್ಚಿಸಿರುವ ತೆರಿಗೆಯಿಂದ ಆಗಿರುವ ತೈಲ ಬೆಲೆ ಏರಿಕೆಯೇ ಹೊರತು, ಕಚ್ಚಾ ತೈಲ ಬೆಲೆ ಏರಿಕೆಯಿಂದಲ್ಲ‘ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಈ ತೈಲ ಬೆಲೆಯನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು‘ ಎಂದು ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.