ಸಾಂದರ್ಭಿಕ ಚಿತ್ರ
ಎ.ಐ ಮೂಲಕ ರಚಿಸಲಾದ ಚಿತ್ರ
ಚೆನ್ನೈ: ಜೂನ್ 19ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಎರಡು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಪಕ್ಷದ ವಕೀಲರ ವಿಭಾಗದ ಕಾರ್ಯದರ್ಶಿ, ಮಾಜಿ ಶಾಸಕರೂ ಆಗಿರುವ ಐಎಸ್ ಇನ್ಬಾದುರೈ ಹಾಗೂ ಪಕ್ಷದ ಚೆಂಗಲ್ಪೇಟ್ ಪೂರ್ವ ಜಿಲ್ಲೆಯ ಪ್ರೆಸಿಡಿಯಂ ಚೇರ್ಮನ್ ಕೂಡ ಆಗಿರುವ ಮಾಜಿ ಶಾಸಕ ಎಂ. ಧನ್ಪಾಲ್ ಅವರ ಹೆಸರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳಸಿಸ್ವಾಮಿ ಘೋಷಿಸಿದ್ದಾರೆ.
ಪಿಎಂಕೆಯ ಅನ್ಬುಮಣಿ ರಾಮದಾಸ್ ಹಾಗೂ ಎಂಡಿಎಂಕೆಯ ವೈಕೊ ಸೇರಿ ತಮಿಳುನಾಡಿನ 6 ಮಂದಿ ರಾಜ್ಯಸಭಾ ಸದಸ್ಯರು 2025ರ ಜುಲೈ 24ರಂದು ನಿವೃತ್ತಿಯಾಗಲಿದ್ದಾರೆ.
6 ಸ್ಥಾನಗಳ ಪೈಕಿ, ವಿಧಾನಸಭೆಯಲ್ಲಿರುವ ಪಕ್ಷಗಳ ಬಲಾಬಲದ ಅನ್ವಯ ಆಡಳಿತರೂಢ ಡಿಎಂಕೆ 4 ಸ್ಥಾನಗಳನ್ನು ಸುಲಭವಾಗಿ ಗೆಲ್ಲುತ್ತದೆ. ಬಿಜೆಪಿ ಹಾಗೂ ಇತರ ಮಿತ್ರ ಪಕ್ಷಗಳ ಬೆಂಬಲದಿಂದ ಎಐಎಡಿಎಂಕೆ 2 ಸ್ಥಾನಗಳಲ್ಲಿ ಗೆಲ್ಲುತ್ತದೆ.
ಡಿಎಂಕೆ ಈಗಾಗಲೇ 3 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಂದು ಸ್ಥಾನವನ್ನು ಮಿತ್ರ ಪಕ್ಷ ಮಕ್ಕಳ್ ನೀಧಿ ಮೈಯಂಗೆ ನೀಡಿದೆ. ಆ ಸ್ಥಾನದಿಂದ ಕಮಲ್ ಹಾಸನ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಹಿರಿಯ ವಕೀಲ ಪಿ. ವಿಲ್ಸನ್, ಸೇಲಂನ ಪಕ್ಷದ ನಾಯಕ ಎಸ್.ಆರ್ ಶಿವಲಿಂಗಂ ಹಾಗೂ ಕವಯಿತ್ರಿ ರುಖಯ್ಯ ಮಲಿಕ್ ಅಲಿಯಾಸ್ ಕವಿಗ್ನರ್ ಸಲ್ಮಾ ಅವರನ್ನೇ ಮತ್ತೆ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ಒಂದು ವೇಳೆ ಬೇರೆ ಯಾರೂ ನಾಮಪತ್ರ ಸಲ್ಲಿಸಲಿದ್ದರೆ, ಈ ಆರೂ ಮಂದಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.