ADVERTISEMENT

‘ಜಾತಿ ಕಾರಣಕ್ಕೆ ಕೋವಿಂದ್‌ರನ್ನು ರಾಷ್ಟಪತಿ ಮಾಡಿದ ಬಿಜೆಪಿ ಅಡ್ವಾಣಿಗೆ ವಂಚಿಸಿತು’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 20:04 IST
Last Updated 17 ಏಪ್ರಿಲ್ 2019, 20:04 IST
   

ಜೈಪುರ: ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರನ್ನು ಬಿಜೆಪಿಯು ಜಾತಿಯ ಆಧಾರದ ನೇಮಿಸಿತು. ಅವರ ಬದಲಿಗೆ ಬಿಜೆಪಿಯ ವರಿಷ್ಠ ಎಲ್‌.ಕೆ ಅಡ್ವಾಣಿ ಅವರನ್ನು ದೇಶದ ಅತ್ಯುನ್ನತ ಹುದ್ದೆಗೆ ನೇಮಿಸಬೇಕಿತ್ತು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್‌ನಲ್ಲಿ 2017ರಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿತ್ತು. ಅದಾಗಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿಗೆ ಅಲ್ಲಿ ಸರ್ಕಾರ ರಚನೆ ಮಾಡುವುದು ಸುಲಭವಲ್ಲ ಎಂದು ಗೊತ್ತಾಗಿತ್ತು. ಆದ್ದರಿಂದಲೇ ಗುಜರಾತ್‌ನ ಕೋಲಿ ಸಮುದಾಯವನ್ನು ತನ್ನತ್ತ ಒಲಿಸಿಕೊಳ್ಳುವ ದೃಷ್ಟಿಯಿಂದ ಅದೇ ಸಮುದಾಯಕ್ಕೆ ಸೇರಿದ ರಾಮನಾಥ್‌ ಕೋವಿಂದ್‌ ಅವರನ್ನು ಮೋದಿ ಸರ್ಕಾರವು ರಾಷ್ಟ್ರಪತಿಗೆ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿತು. ಹೀಗಾಗಿಯೇ ಅಡ್ವಾಣಿ ಅವರು ಅವಕಾಶ ವಂಚಿತರಾದರು ಎಂದು ಗೆಹ್ಲೋಟ್‌ ಆರೋಪಿಸಿದ್ದಾರೆ.

ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿರುವ ಅಶೋಕ್‌ ಗೆಹ್ಲೋಟ್‌, ‘ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ರಾಷ್ಟ್ರಪತಿಗಳ ಮೇಲೆ ನನಗೆ ಅಪಾರವಾದ ಗೌರವವಿದೆ. ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ರಾಮನಾಥ್‌ ಅವರನ್ನು ವೈಯಕ್ತಿಕವಾಗಿ ಬಲ್ಲೆ. ಅವರ ಸರಳತೆ, ವಿನಯವಂತಿಕೆಗೆ ನಾನು ಪ್ರಭಾವಿತನಾಗಿದ್ದೇನೆ,’ ಎಂದು ಹೇಳಿದ್ದಾರೆ.

ADVERTISEMENT

ಗೆಹ್ಲೋಟ್‌ ಅವರ ಇದೇ ಮಾತುಗಳನ್ನಿಟ್ಟುಕೊಂಡು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ, ರಾಷ್ಟ್ರಪತಿಯವರ ಕುರಿತಾಗಿಹೇಳಿಕೆ ಟೀಕೆಗಳನ್ನು ನೀಡಬಾರದು ಎಂದು ಚುನಾವಣೆ ಆಯೋಗ ಗೆಹ್ಲೋಟ್‌ಗೆ ಸೂಚನೆ ನೀಡಬೇಕು. ಈ ಬಗ್ಗೆ ನೋಟಿಸ್‌ ಜಾರಿ ಮಾಡಬೇಕು ಎಂದಿದೆ.

ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ್‌ ಕೋವಿಂದ್‌ ಅವರನ್ನು ಕೇಂದ್ರ ಬಿಜೆಪಿ ಸರ್ಕಾರ 2017ರಲ್ಲಿ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿಕೊಂಡಿತ್ತು. ಮೂಲತಃ ಉತ್ತರಪ್ರದೇಶದವರಾದ ಕೋವಿಂದ್‌ ಅವರು ಕೋಲಿ ಸಮುದಾಯಕ್ಕೆ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.