ಸೂರತ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮದೇವಾಲಯಕ್ಕೆ ಸೂರತ್ನ ವಜ್ರದ ವ್ಯಾಪಾರಿ ಗೋವಿಂದಭಾಯ್ ಧೋಲಾಕಿಯಾ ಎನ್ನುವವರು 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ದೇಗುಲ ನಿರ್ಮಾಣದ ಸಲುವಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಇಂದಿನಿಂದ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಿಸಿದೆ. ಗೋವಿಂದಭಾಯ್ ಅವರು ವಿಎಚ್ಪಿ ಕಚೇರಿಯಲ್ಲಿ ಧನ ಸಹಾಯ ಮಾಡಿದ್ದಾರೆ.
ಸೂರತ್ನಲ್ಲಿ ವಜ್ರದ ವ್ಯಾಪಾರಿಯಾಗಿರುವ ಗೊವಿಂದಭಾಯ್ ಅವರು, ಹಲವು ವರ್ಷಗಳಿಂದ ಆರ್ಎಸ್ಎಸ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಇವರಷ್ಟೇ ಅಲ್ಲದೆ, ಸಾಕಷ್ಟು ವ್ಯಾಪಾರಿಗಳು ಸುಮಾರು ₹ 5 ಲಕ್ಷದಿಂದ 21 ಲಕ್ಷದ ವರೆಗೆ ದೇಣಿಗೆ ನೀಡಿದ್ದಾರೆ. ಮಹೇಶ್ ಕಬೂಟರ್ವಾಲಾ ಎನ್ನುವವರು ₹ 5 ಕೋಟಿ, ಲವಜಿ ಬಾದ್ಶಾ ಅವರು ₹ 1 ಕೋಟಿ ನೀಡಿದ್ದಾರೆ.
ದೇಣಿಗೆ ಸಂಗ್ರಹದ ಬಗ್ಗೆ ಮಾತನಾಡಿರುವವಿಎಚ್ಪಿ ನಾಯಕ ಅಲೋಕ್ ಕುಮಾರ್ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ಮೊದಲು ಧನ ಸಹಾಯ ಮಾಡಿದರು ಎಂದು ಹೇಳಿದ್ದಾರೆ. ‘ಅವರು (ರಾಷ್ಟ್ರಪತಿ) ದೇಶದ ಮೊದಲ ಪ್ರಜೆ. ಹಾಗಾಗಿ ನಾವು ಈ ಅಭಿಯಾನವನ್ನು ಅವರ ಮೂಲಕವೇ ಆರಂಭಿಸಲು ತೆರಳಿದೆವು. ಕೋವಿಂದ್ ಅವರು 5.01 ಲಕ್ಷ ರೂಪಾಯಿ ದೇಣಿಗೆ ನೀಡಿದರು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.