ರೇಖಾ ಗುಪ್ತ
ನವದೆಹಲಿ: ‘ಯಾವ ರಾಮಲೀಲಾ ಕಾರ್ಯಕ್ರಮ ರಾತ್ರಿ 10ಕ್ಕೆ ಕೊನೆಗೊಳ್ಳುತ್ತದೆ? ಹಿಂದೂಗಳ ಹಬ್ಬಗಳು ಸದಾ ಸಂಕಷ್ಟಕ್ಕೆ ಸಿಲುಕಿವೆ? ದೆಹಲಿಯಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
ದುರ್ಗಾಪೂಜೆ ಮತ್ತು ರಾಮಲೀಲಾ ಕಾರ್ಯಕ್ರಮಗಳನ್ನು ಮಧ್ಯರಾತ್ರಿಯವರೆಗೂ ನಡೆಸಲು ಸರ್ಕಾರ ಅನುಮತಿ ನೀಡಿದೆ.
‘ಗುಜರಾತ್ನಲ್ಲಿ ದಾಂಡಿಯಾ ಇಡೀ ರಾತ್ರಿ ನಡೆಯುತ್ತದೆ. ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಹಾಗಿದ್ದರೆ ದೆಹಲಿ ಜನರ ತಪ್ಪಾದರೂ ಏನು? ಹೀಗಾಗಿ ನವರಾತ್ರಿ ಉತ್ಸವಕ್ಕೆ ಈ ಬಾರಿ ರಾತ್ರಿ 12ರವರೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ರಾಮಲೀಲಾ, ದುರ್ಗಾಪೂಜೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12ರವರೆಗೂ ನಡೆಸಬಹುದು’ ಎಂದಿದ್ದಾರೆ.
ರಾಮಲೀಲಾ, ದುರ್ಗಾಪೂಜೆ, ದಸರಾ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಸುವ ಅವಧಿಯನ್ನು ದೆಹಲಿ ಸರ್ಕಾರ ಸೋಮವಾರದಿಂದ ವಿಸ್ತರಿಸಿದೆ. ಈ ಆದೇಶವು ಸೆ. 22ರಿಂದ ಅ. 3ರವರೆಗೆ ಇರಲಿದೆ. ಸರ್ಕಾರದ ಈ ನಿರ್ಧಾರಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸೆಕ್ಸೇನಾ ಅನುಮೋದನೆ ನೀಡಿದ್ದಾರೆ.
ಈ ಆದೇಶವು ಶಬ್ದಮಾಲಿನ್ಯದ ನಿರ್ಬಂಧಗಳಿಗೆ ಒಳಪಟ್ಟು ಕಾರ್ಯಕ್ರಮಗಳನ್ನು ರಾತ್ರಿ 10ರ ಬದಲು ಮಧ್ಯರಾತ್ರಿ 12ರವರೆಗೂ ನಡೆಸಲು ಸರ್ಕಾರ ಅನುಮತಿಸಿದೆ. ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕಗಳಿಂದ ಹೊರಹೊಮ್ಮುವ ಶಬ್ದವು 45 ಡೆಸಿಬಲ್ ಮೀರುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು ಮುಖ್ಯಮಂತ್ರಿ ಮತ್ತು ಲೆಪ್ಟಿನೆಂಟ್ ಗವರ್ನರ್ಗೆ ಧನ್ಯವಾದ ಹೇಳಿದ್ದಾರೆ. ರಾಮಲೀಲಾ ಸಮಿತಿಯ ಬಹುದಿನಗಳ ಬೇಡಿಕೆಯಾಗಿತ್ತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.