ಸಾಂದರ್ಭಿಕ ಚಿತ್ರ
ಇಂದೋರ್: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಲಿ ಕಚ್ಚಿ ಗಾಯಗೊಂಡ ಪ್ರಯಾಣಿಕನೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ವೈದ್ಯರೊಬ್ಬರನ್ನು ಸೇವೆಯಿಂದ ವಜಾಗೊಳಿಸಲು ನಿರ್ಧಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಇಂದೋರ್ನಿಂದ ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯೊಬ್ಬರಿಗೆ ಇಂದೋರ್ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದ ಬಳಿ ಇಲಿ ಕಚ್ಚಿದ್ದು, ಅವರು ಗಾಯಗೊಂಡಿದ್ದರು.
ಘಟನೆಯ ಬಳಿಕ ಪ್ರಯಾಣಿಕ ತನ್ನ ವೈಯಕ್ತಿಕ ವೈದ್ಯರ ಸಲಹೆ ಮೇರೆಗೆ ರೇಬಿಸ್ ಲಸಿಕೆ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ. ಆದರೆ ವಿಮಾನ ನಿಲ್ದಾಣದ ಆರೋಗ್ಯ ಘಟಕದಲ್ಲಿ ಆ ಲಸಿಕೆ ಲಭ್ಯವಿರಲಿಲ್ಲ. ವಿಮಾನ ನಿಲ್ದಾಣದ ವೈದ್ಯರು ಅವರಿಗೆ ಟೆಟನಸ್ (tetanus) ಇಂಜೆಕ್ಷನ್ ನೀಡಿದ್ದಾರೆ. ಗಾಯಕ್ಕೆ ಪಟ್ಟಿ ಕಟ್ಟಿ, ಪ್ರತಿಜೀವಕ (antibiotic) ಮಾತ್ರೆಗಳನ್ನು ನೀಡಿದ್ದಾರೆ.
ಗಾಯಗೊಂಡ ಪ್ರಯಾಣಿಕನೊಂದಿಗೆ ವೈದ್ಯ ಅನುಚಿತವಾಗಿ ವರ್ತಿಸಿದ್ದಾರೆಂದು ನಮಗೆ ತಿಳಿದುಬಂದಿದೆ. ಆದರೆ ಅವರ ವರ್ತನೆ ಒರಟಾಗಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಅವರ ಬದಲಿಗೆ ಬೇರೆ ವೈದ್ಯರನ್ನು ನೇಮಿಸುವಂತೆ ಖಾಸಗಿ ಆಸ್ಪತ್ರೆಗೆ ತಿಳಿಸಿದ್ದೇವೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿಪಿಂಕಾಂತ್ ಸೇಠ್ ಹೇಳಿದ್ದಾರೆ.
ಟೆಂಡರ್ ಷರತ್ತುಗಳ ಅಡಿಯಲ್ಲಿ ಕೀಟ ನಿಯಂತ್ರಣ ಏಜೆನ್ಸಿಗೆ ₹ 500 ದಂಡ ವಿಧಿಸಲಾಗಿದೆ. ಅಲ್ಲದೇ ಹೌಸ್ಕೀಪಿಂಗ್ ಗುತ್ತಿಗೆದಾರರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.