ADVERTISEMENT

ಕೋಮುಗಲಭೆಗೆ ಕಾರಣವಾದ ರಸ್ತೆ ಅಪಘಾತ; ಗುಜರಾತ್‌ನ ವಡೋದರದಲ್ಲಿ 19 ಜನರ ಬಂಧನ

ಪಿಟಿಐ
Published 18 ಏಪ್ರಿಲ್ 2022, 5:40 IST
Last Updated 18 ಏಪ್ರಿಲ್ 2022, 5:40 IST
(ಪ್ರಾತಿನಿಧಿಕ ಚಿತ್ರ. ಕೃಪೆ –ಪಿಟಿಐ)
(ಪ್ರಾತಿನಿಧಿಕ ಚಿತ್ರ. ಕೃಪೆ –ಪಿಟಿಐ)   

ವಡೋದರ (ಗುಜರಾತ್): ನಗರದಲ್ಲಿ ಸಂಭವಿಸಿದ ಸಣ್ಣ ಅಪಘಾತವೊಂದು ಕೋಮು ಘರ್ಷಣೆಗೆ ಕಾರಣವಾಗಿದೆ. ಗಲಭೆಕೋರರು ಕಲ್ಲುತೂರಾಟ ನಡೆಸಿದ್ದು, ದೇವಾಲಯವೊಂದನ್ನು ದ್ವಂಸಗೊಳಿಸಿದ್ದಾರೆ. ಹಲವು ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಎರಡು ಕೋಮುಗಳಿಗೆ ಸೇರಿದ ವ್ಯಕ್ತಿಗಳ ದ್ವಿಚಕ್ರ ವಾಹನಗಳ ನಡುವೆ ನಗರದ ರಾವ್‌ಪುರ ಪ್ರದೇಶದಲ್ಲಿ ಭಾನುವಾರ ಅಪಘಾತವಾಗಿತ್ತು. ಇದು ಕೋಮು ಘರ್ಷಣೆಗೆ ಕಾರಣವಾಗಿದೆ. ಸುದ್ದಿ ಹರಡುತ್ತಿದ್ದಂತೆ ಎರಡೂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಪರಸ್ಪರ ಕಲ್ಲುತೂರಾಟ ಆರಂಭಿಸಿದರು. ಈ ವೇಳೆ, ರಸ್ತೆ ಪಕ್ಕದಲ್ಲಿಯೇ ಇದ್ದ ದೇವಾಲಯದ ವಿಗ್ರಹವನ್ನು ಗುಂಪೊಂದು ದ್ವಂಸಗೊಳಿಸಿದೆ. ಎರಡು ಆಟೋರಿಕ್ಷಾಗಳು ಮತ್ತು ಹಲವು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ಎಂದು ಕರೇಲಿಬಾಗ್ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧರ್ಮ ನಿಂದನೆಯ ಉದ್ದೇಶದಿಂದ ಗಲಭೆ ನಡೆಸಿದ್ದು, ಕಾನೂನುಬಾಹಿರವಾಗಿ ಗುಂಪುಗೂಡಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಅಲೆದಾಡಿದ್ದು ಮತ್ತು ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪಗಳ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

'ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ, ರಾತ್ರಿಯೇ 15 ಜನರನ್ನು ಬಂಧಿಸಿದ್ದೇವೆ' ಎಂದು ಡಿಸಿಪಿ (ವಲಯ–4) ಪನ್ನ ಮೊಮಯ ತಿಳಿಸಿದ್ಡಾರೆ.

ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು,ಈವರೆಗೆ ಒಟ್ಟು 19 ಜನರನ್ನು ಬಂಧಿಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.