
ಡೆಹ್ರಾಡೂನ್: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಬದಲಾಗಿ, ಸಮಾಜ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಂಬಿಕೆ ಇಟ್ಟಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಡೆಹ್ರಾಡೂನ್ನಲ್ಲಿ ಭಾನುವಾರ ನಡೆದ ಸಂಘದ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.
ಪ್ರತಿಯೊಬ್ಬರೂ ವೈಯಕ್ತಿಕವಾಗಿ ಪ್ರಭಾವಶಾಲಿಗಳಾಗಬೇಕು ಎಂಬುದು ಸಂಘದ ಉದ್ದೇಶ. ಏಕೆಂದರೆ, ಬಲಿಷ್ಠರಿಂದಷ್ಟೇ ಸದೃಢ ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಸಾಧ್ಯ ಎಂದಿದ್ದಾರೆ. ಹಾಗೆಯೇ, ಸಂಘವು ವಾಸ್ತವದಲ್ಲಿ ಏನೆಲ್ಲಾ ಮಾಡುತ್ತಿದೆ ಎಂಬುದನ್ನು ಹೊರಗಿನಿಂದ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕೆಲವರು ಆರ್ಎಸ್ಎಸ್ ಅನ್ನು ಅರೆ ಸೈನಿಕ ಪಡೆ ಎಂಬಂತೆ ನೋಡುತ್ತಾರೆ. ಇನ್ನೂ ಕೆಲವರು ಸೇವಾ ಸಂಘಟನೆ ಎಂದುಕೊಂಡಿದ್ದಾರೆ. ಆದರೆ ಸಂಘವು ಆ ಎಲ್ಲಾ ಮಿತಿಗಳನ್ನು ಮೀರಿ ಕೆಲಸ ಮಾಡುವ ಸಾಮಾಜಿಕ ಶಕ್ತಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ.
'ಸಂಘಯಾತ್ರೆ - ಹೊಸ ದಿಗಂತಗಳು, ಹೊಸ ಆಯಾಮಗಳು' ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಭಾರತವು ಮತ್ತೊಮ್ಮೆ ಜಾಗತಿಕ ನಾಯಕತ್ವ ವಹಿಸಿಕೊಳ್ಳಬೇಕು ಎಂಬುದಾಗಿ ಜಗತ್ತು ಬಯಸುತ್ತಿದೆ. ಹಾಗಾಗಿ, ಸಂಘದ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಸಮಾಜ ಮತ್ತು ರಾಷ್ಟ್ರವನ್ನು ಸದೃಢವಾಗಿ ನಿರ್ಮಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಏಕತೆಗಾಗಿ ಶ್ರಮಿಸುವವರಷ್ಟೇ ಹಿಂದೂಗಳು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಯ್ನಾಡಿನ ಮೇಲೆ ಗೌರವ, ನಿಷ್ಠೆ ಹೊಂದಿರುವುದು ಅತ್ಯಗತ್ಯ. ಜಗತ್ತು ಸತ್ಯಕ್ಕಿಂತಲೂ ಚೆನ್ನಾಗಿ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತದೆ. ಹಾಗಾಗಿ, ಅಧಿಕಾರ ಹಿಡಿಯುವುದು ತುಂಬಾ ಮುಖ್ಯ. ಆದರೆ, ಅದರ ಬಳಕೆಗೆ ಇತಿಮಿತಿಗಳಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರು ಸಂಪೂರ್ಣವಾಗಿ ಸ್ವತಂತ್ರರು ಎಂದಿರುವ ಆರ್ಎಸ್ಎಸ್ ಮುಖ್ಯಸ್ಥ , ದೇಶದ ಆಡಳಿತದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆಯು ಶೇ 33 ಕ್ಕೆ ಸೀಮಿತವಾಗಿರದೆ ಶೇ 50ಕ್ಕೆ ಏರಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.