ಶಬರಿಮಲೆ
ಕೊಚ್ಚಿ: ಉದ್ದೇಶಿತ ಶಬರಿಮಲೆ ಗ್ರೀನ್ಫೀಲ್ಡ್ ಏರ್ಪೋರ್ಟ್ಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಯೋಜನೆಗೆ ಎಷ್ಟು ಭೂಮಿ ಬೇಕೆನ್ನುವುದನ್ನು ನಿರ್ಣಯಿಸಲು ಸರ್ಕಾರ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
2022ರ ಡಿಸೆಂಬರ್ 30ರಂದು ಚೆರುವಳ್ಳಿ ಎಸ್ಟೇಟ್ ಹಾಗೂ ಅದರ ಹೊರಗೆ ಇರುವ ಹೆಚ್ಚುವರಿ 307 ಎಕರೆಗಳನ್ನು ಒಳಗೊಂಡ 2,570 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಅಯನಾ ಚಾರಿಟೇಬಲ್ ಟ್ರಸ್ಟ್ ಮತ್ತು ಅದರ ವ್ಯವಸ್ಥಾಪಕ ಟ್ರಸ್ಟಿ ಡಾ. ಸಿನಿ ಪುನ್ನೂಸ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಜಯಚಂದ್ರನ್, ಭೂಸ್ವಾಧೀನ, ಪುನರ್ವಸತಿ ಮತ್ತು ತೀರುವಳಿ ಕಾಯ್ದೆ, 2013ರಡಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆಯಡಿ ತೆಗೆದುಕೊಂಡ ನಿರ್ಧಾರವು ದೋಷಪೂರಿತವಾಗಿದೆ ಎಂದು ತೀರ್ಪು ನೀಡಿದ್ದಾರೆ.
ಡಿಸೆಂಬರ್ 19 ರ ತನ್ನ ಆದೇಶದಲ್ಲಿ, ಯೋಜನೆಗೆ ಬೇಕಾಗಿರುವ ಕನಿಷ್ಠ ಭೂಮಿಯ ಅವಶ್ಯಕತೆಯನ್ನು ಪರಿಶೀಲನೆಗೆ ಸೀಮಿತವಾದ ಸಾಮಾಜಿಕ ಪರಿಣಾಮ ಮೌಲ್ಯಮಾಪನವನ್ನು ಮತ್ತೆ ನಡೆಸುವ ಮೂಲಕ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು. ಬಳಿಕ ತಜ್ಞರ ಗುಂಪಿನಿಂದ ಮೌಲ್ಯಮಾಪನ ನಡೆಸಿ ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಸಾಮಾಜಿಕ ಪರಿಣಾಮ ಮೌಲ್ಯಮಾಪನ (ಎಸ್ಐಎ) ವರದಿ, ತಜ್ಞರ ಸಮಿತಿಯ ಮೌಲ್ಯಮಾಪನ, ಸ್ವಾಧೀನಕ್ಕೆ ಅನುಮೋದನೆ ನೀಡುವ ರಾಜ್ಯ ಸರ್ಕಾರದ ಆದೇಶ ಮತ್ತು ಅಧಿಸೂಚನೆ ಸೇರಿದಂತೆ ಹಲವಾರು ಸರ್ಕಾರಿ ಕ್ರಮಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು.
ಪತ್ತನಂತಿಟ್ಟ ಜಿಲ್ಲೆಯ ಚೆರುವಳ್ಳಿ ಎಸ್ಟೇಟ್ನಲ್ಲಿರುವ ವಿವಾದಿತ ಭೂಮಿಯನ್ನು, ಶಬರಿಮಲೆ ಯಾತ್ರಿಕರಿಗೆ ಅನುಕೂಲವಾಗಲೆಂದು ಉದ್ದೇಶಿಸಲಾದ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.
ಸಾರ್ವಜನಿಕ ಉದ್ದೇಶಗಳಿಗಾಗಿ ರಾಜ್ಯವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಹೊಂದಿದ್ದರೂ, ಯೋಜನೆಗೆ ಅಗತ್ಯವಿರುವ ‘ಸಂಪೂರ್ಣ ಕನಿಷ್ಠ’ ಪ್ರಮಾಣದ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಬಹುದು ಎನ್ನುವುದು ಕಾನೂನಿನಲ್ಲಿ ಸ್ಪಷ್ಟವಾಗಿದೆ ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ.
2013 ರ ಕಾಯಿದೆಯ ಸೆಕ್ಷನ್ 4(4)(d), 7(5)(b), ಮತ್ತು 8(1)(c) ಅಡಿಯಲ್ಲಿ ಈ ಕಡ್ಡಾಯ ಅವಶ್ಯಕತೆಯನ್ನು ಸರಿಯಾಗಿ ಪಾಲಿಸಲಾಗಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಯೋಜನೆಗೆ ಬೇಕಾದ ಭೂಮಿ ಎಷ್ಟು ಎನ್ನುವುದನ್ನೂ ನಿರ್ಣಯಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಹೀಗಾಗಿ ಎಸ್ಐಎ ವರದಿ, ತಜ್ಞರ ಸಮಿತಿ ವರದಿ ಮತ್ತು ಸರ್ಕಾರಿ ಆದೇಶವು ಅಮಾನ್ಯ ಎಂದು ಕೋರ್ಟ್ ಹೇಳಿದೆ. ಅಲ್ಲದೆ ಸೆಕ್ಷನ್ 11 ರಡಿ ಹೊರಡಿಸಿದ್ದ ಅಧಿಸೂಚನೆಯನ್ನೂ ಕೋರ್ಟ್ ರದ್ದು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.